ಪೆಟ್ರೋಲಲ್ಲಿ ಕೈತೊಳೆದುಕೊಂಡ ಜೈಪಾಲ್ ರೆಡ್ಡಿ
ಪೆಟ್ರೋಲ್ ಬೆಲೆ ಏರಿಕೆಯನ್ನು ಬಲವಾಗಿ ಬೆಂಬಲಿಸಿರುವ ಜೈಪಾಲ್ ರೆಡ್ಡಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯನ್ನು ಕೇಂದ್ರ ಸರಕಾರ ಗಮನಿಸುತ್ತಿದ್ದು, ಏರಿಸಿರುವ ಬೆಲೆಯನ್ನು ಇಳಿಸುವ ಪ್ರಮೇಯವನ್ನು ತಳ್ಳಿಹಾಕಿದರು. ತೈಲ ಬೆಲೆ ಏರಿಸುವ ನಿರ್ಧಾರ ತೈಲ ಕಂಪನಿಗಳದ್ದಾಗಿದ್ದು, ಕೇಂದ್ರ ಹೆಚ್ಚಿಗೆ ಏನೂ ಮಾಡುವುದು ಸಾಧ್ಯವಿಲ್ಲ ಎಂದು ಕೈಚೆಲ್ಲಿದ್ದಾರೆ.
"ದೇಶ ಎರಡು ವಿಪರೀತ ಪರಿಸ್ಥಿತಿಗಳನ್ನು ಎದುರಿಸುತ್ತಿದೆ. ಡಾಲರ್ಗೆ ಪ್ರತಿಯಾಗಿ ರುಪಾಯಿ ಮೌಲ್ಯ ತೀವ್ರವಾಗಿ ಕುಸಿಯುತ್ತಿದೆ. ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರುಮುಖವಾಗಿದೆ. ಇದು ಜಾಗತಿಕ ವಿದ್ಯಮಾನವಾಗಿದ್ದು, ನಿಯಂತ್ರಣ ನಮ್ಮ ಕೈಯಲ್ಲಿಲ್ಲ. ಇದಕ್ಕೆ ತ್ವರಿತಗತಿಯಲ್ಲಿ ಪರಿಹಾರ ಕಂಡುಕೊಳ್ಳುವುದೂ ಅಸಾಧ್ಯ" ಎಂದು ಅವರು ಸದ್ಯದ ಪರಿಸ್ಥಿತಿಯ ಬಣ್ಣನೆ ಮಾಡಿದರು.
ಈ ಬೆಲೆ ಏರಿಕೆಯಿಂದ ದೇಶದಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಕೇಂದ್ರಕ್ಕೆ ಅರಿವಿದೆ. ಆದರೆ, ತೈಲ ಬೆಲೆ ಏರಿಸದೆ ವಿಧಿಯೇ ಇಲ್ಲ. ತೀವ್ರ ನಷ್ಟವನ್ನು ಎದುರಿಸುತ್ತಿರುವ ತೈಲ ಕಂಪನಿಗಳು ಮತ್ತಷ್ಟು ಸಂಕಷ್ಟದಲ್ಲಿ ಸಿಲುಕುವುದರಿಂದ ಪಾರು ಮಾಡದೆ ಬೇರೆ ದಾರಿಯೇ ಇರಲಿಲ್ಲ ಎಂದು ಅವರು ವಿಶ್ಲೇಷಿಸಿದರು.
ಇತ್ತೀಚೆಗೆ ಅನೇಕಾನೇಕ ಕಾರಣಗಳಿಂದ ಪೆಟ್ರೋಲ್ ಬೆಲೆ ಏರಿಸದಿದ್ದರಿಂದ ತೈಲ ಕಂಪನಿಗಳು 2010-11ರಲ್ಲಿ 2,200 ಕೋಟಿ ರು. ನಷ್ಟ ಅನುಭವಿಸಿವೆ. 2011-12ರಲ್ಲಿ 4,800 ಕೋಟಿ ರು. ನಷ್ಟ ಕಂಡಿವೆ ಮತ್ತು 2012ರಲ್ಲಿ ಕಳೆದ ಎರಡು ತಿಂಗಳಲ್ಲಿ ತೈಲ ಕಂಪನಿಗಳು 2,330 ಕೋಟಿ ರು. ನಷ್ಟ ಅನುಭವಿಸಿವೆ. ಪೆಟ್ರೋಲ್ ಬೆಲೆ ನಿಯಂತ್ರಣಕ್ಕೆ ಬರಬೇಕಿದ್ದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಟ್ಟಿಗೆ ಕೆಲಸ ಮಾಡಬೇಕು. ಎಲ್ಲ ರಾಜ್ಯಗಳು ಮತ್ತು ಎಲ್ಲ ಪಕ್ಷಗಳು ಒಗ್ಗಟ್ಟಾಗಿ ಇಂಥ ಪರಿಸ್ಥಿತಿಯನ್ನು ಎದುರಿಸಬೇಕು ಎಂದು ಅವರು ನುಡಿದರು.
ಪೆಟ್ರೋಲ್ ಬೆಲೆ ಇಳಿಸುವುದರಿಂದ ಕೇಂದ್ರ ಹಿಂಜರಿದಿರುವುದರಿಂದ ರಾಜ್ಯ ಸರಕಾರಗಳೇ ಶ್ರೀಸಾಮಾನ್ಯರ ಕೈಹಿಡಿಯಬೇಕಾಗಿದೆ. ತೆರಿಗೆ ಕಡಿತ ಮಾಡಿ ಕಳೆದ ಬಾರಿ ಗೋವಾ ಇತರ ರಾಜ್ಯಗಳಿಗೆ ಉತ್ತಮ ಮುನ್ನುಡಿ ಹಾಕಿಕೊಟ್ಟಿತ್ತು. ಈ ಬಾರಿ ಕೇರಳ ತೆರಿಗೆ ಕಡಿತ ಮಾಡಿ ಬೆಲೆಯಲ್ಲಿ 1.23 ರು.ನಷ್ಟು ಇಳಿಯುವಂತೆ ಮಾಡಿದೆ. ಆದರೆ, ಕರ್ನಾಟಕದ ಮುಖ್ಯಮಂತ್ರಿಗಳು ಮಾತ್ರ ಇಲ್ಲಿಯವರೆಗೆ ಯಾವುದೇ ಹೇಳಿಕೆಯಾಗಲಿ ನೀಡಿಲ್ಲ, ಯಾವುದೇ ಕ್ರಮಕ್ಕೂ ಮುಂದಾಗಿಲ್ಲ. ಈ ಬಗ್ಗೆ ಚಿಂತಿಸಲು ಸಮಯವಾದರೂ ಎಲ್ಲಿದೆ ನಮ್ಮ ಡಿವಿ ಸದಾನಂದ ಗೌಡರಿಗೆ!
ಪೆಟ್ರೋಲ್ ಮೇಲಿನ ಹಣ ಉಳಿಕೆ ಹೇಗೆ? : ಕೇಂದ್ರವೂ ಕೈಕೊಟ್ಟಿರುವಾಗ, ರಾಜ್ಯವೂ ಹಿಂದೆಮುಂದೆ ನೋಡುತ್ತಿರುವಾಗ ಶ್ರೀಸಾಮಾನ್ಯರೇ ಪೆಟ್ರೋಲ್ ಮೇಲೆ ಹೆಚ್ಚಿಗೆ ಖರ್ಚು ಮಾಡದಂತೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಚಿಂತಿಸಬೇಕಿದೆ. ಈಗಾಗಲೆ ಅನೇಕ ನಾಗರಿಕರು ಸೈಕಲ್ ಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದಾರೆ. ಸಾಫ್ಟ್ವೇರ್ ಕಂಪನಿಗಳಲ್ಲಿ ಸೈಕಲ್ ಕೊಳ್ಳಲು ನೌಕರರನ್ನು ಉತ್ತೇಜಿಸುತ್ತಿವೆ. ಅದು ಬಿಟ್ಟರೆ, ಖಾಸಗಿ ವಾಹನ ಮನೆಯಲ್ಲಿಟ್ಟು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅವಲಂಬಿಸಬೇಕಿದೆ. ಅದೂ ಸಾಧ್ಯವಾಗದಿದ್ದರೆ, ಕಾರು ಬಳಸುವವರು ಕಾರ್ ಪೂಲಿಂಗ್ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಲು ಅಗತ್ಯವಿದೆ. ಈ ನಡುವೆ, ವಿರೋಧ ಪಕ್ಷ ಎನ್ಡಿಎ ಅಂಗಪಕ್ಷಗಳು ಪೆಟ್ರೋಲ್ ಏರಿಕೆಯ ವಿರುದ್ಧ ಮೇ 31ರಂದು ಭಾರತ ಬಂದ್ಗೆ ಕರೆ ನೀಡಿವೆ, ನೆನಪಿರಲಿ.