ಯಡ್ರಾಮಿಯಲ್ಲಿ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ
ಹದಿನೈದು ವರ್ಷದ ಬಾಲಕಿ ಮನೆಯಲ್ಲಿ ಒಬ್ಬಳೆ ಇದ್ದಾಗ ಅದೇ ತಾಂಡಾ ನಿವಾಸಿಗಳಾದ ಅಶೋಕ, ಯಲ್ಲಪ್ಪ, ಹಾಗೂ ಹರೀಶ್ ಎಂಬ ಯುವಕರು ಬಾಲಕಿಯನ್ನು ಬಲವಂತವಾಗಿ ಮನೆಯಿಂದ ಕರೆದುಕೊಂಡು ಹೋಗಿ, ಹೊಲದಲ್ಲಿ ಅತ್ಯಾಚಾರ ಮಾಡಿದ್ದಾರೆ.
ಬಾಲಕಿಗೆ ಗೆಳತಿಯರ ಜೊತೆ ಆಟ ಆಡಿಕೊಂಡು, ಅಪ್ಪ-ಅಮ್ಮನ ನೆರಳಲ್ಲಿ ಬೆಳೆಯುವ ವಯಸ್ಸು. ಆದರೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಹೀಗಾಗಿ ತಂದೆ-ತಾಯಿ ಮಗಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ದೂರದ ಊರಿಗೆ ದುಡಿಯಲು ಹೋಗಿದ್ದಾರೆ. ಇತ್ತ ಮನೆಯಲ್ಲಿದ್ದ ಮಂದಿಯೆಲ್ಲಾ ಸಂಬಂಧಿಕರ ಮನೆಯಲ್ಲಿದ್ದ ಕಾರ್ಯಕ್ರಮಕ್ಕೆಂದು ಬೇರೆ ಊರಿಗೆ ತೆರಳಿದಾಗ ಬಾಲಕಿಯ ಮೇಲೆ ಬಲಾತ್ಕಾರ ನಡೆದಿದೆ.
ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿರುವ ಬಾಲಕಿ ಯಾರಾದರೂ ಮಾತನಾಡಿಸಲು ಬಂದರೆ ಹೆದರಿ ನಡುಗುತ್ತಿದ್ದಾಳೆ. ಅತ್ಯಾಚಾರದ ನಂತರ ದುಷ್ಕರ್ಮಿಗಳು ಘಟನೆಯ ಬಗ್ಗೆ ಮನೆಯಲ್ಲಿ ತಿಳಿಸಿದರೆ ಕೊಲೆ ಮಾಡುವುದಾಗಿ ಹೆದರಿಸಿದ್ದಾರಂತೆ. ಹೀಗಾಗಿ ಬಾಲಕಿ ದೈಹಿಕ ಹಾಗೂ ಮಾನಸಿಕವಾಗಿ ತೀವ್ರ ಘಾಸಿಗೊಳಗಾಗಿದ್ದಾಳೆ. ಸದ್ಯಕ್ಕೆ ಬಾಲಕಿಯನ್ನು ಗುಲ್ಬರ್ಗಾ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅತ್ಯಾಚಾರ ಎಸಗಿರುವ ಮೂರು ಆರೋಪಿಗಳು ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.