ನೀವು ಭ್ರಷ್ಟಾಚಾರ ವಿರೋಧಿಯಾಗಿದ್ದರೆ ಮಲ್ಲೇಶ್ವರಕ್ಕೆ ಬನ್ನಿ
ಭ್ರಷ್ಟಾಚಾರದ ವಿರುದ್ಧ ಯುದ್ಧ ಸಾರಿರುವ, ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆಯವರು ನಾಗರಿಕರನ್ನು ಖುದ್ದಾಗಿ ಭೇಟಿ ಮಾಡಿ, ಜೂನ್ 10ರಂದು ನಡೆಯಲಿರುವ ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಯಲ್ಲಿ 'ಭ್ರಷ್ಟಾಚಾರ ವಿರೋಧಿ' ಅಭ್ಯರ್ಥಿಗೆ ಮತ ಹಾಕಬೇಕೆಂದು ಕರೆ ನೀಡಲಿದ್ದಾರೆ.
'ನ್ಯಾಯದ ಹಾದಿಯಲ್ಲಿ ನಡೆಯಿರಿ' ಎಂಬ ಅಭಿಯಾನವನ್ನು ಸಂತೋಷ್ ಹೆಗ್ಡೆಯವರು ಬೆಂಗಳೂರು ನಗರದ ಉದ್ದಗಲಕ್ಕೂ ಕೊಂಡೊಯ್ಯುತ್ತಿದ್ದಾರೆ. ಮೊದಲಿಗೆ ಮಲ್ಲೇಶ್ವರ 17ನೇ ಕ್ರಾಸ್ನಲ್ಲಿರುವ 'ಭೂಮಿಕಾ'ದಲ್ಲಿ ಸಂಜೆ 5.30ಕ್ಕೆ ಮತದಾರರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದರ ನೇತೃತ್ವವನ್ನು ಪರಸರ ಹೋರಾಟಗಾರ್ತಿ ಡಾ. ಮೀನಾಕ್ಷಿ ಭರತ್ ಅವರು ವಹಿಸುತ್ತಿದ್ದಾರೆ.
ಇದರ ನಂತರ ಸಂಜೆ 7 ಗಂಟೆ ಹೊತ್ತಿಗೆ ರಾಜಾಜಿನಗರದ ಪಶ್ಚಿಮ ಕಾರ್ಡ್ ರಸ್ತೆಯ ಎರಡನೇ ಹಂತದಲ್ಲಿರುವ ಡಾ. ಅಂಬೇಡ್ಕರ್ ಕಾಲೇಜ್ ಆಫ್ ಎಜ್ಯುಕೇಷನ್ನಲ್ಲಿ ನಾಗರಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಭ್ರಷ್ಟಾಚಾರದ ವಿರುದ್ಧ ತಮ್ಮ ಅಭಿಯಾನವನ್ನು ಮನೆಮನೆಗೂ ಕೊಂಡೊಯ್ಯಲಿದ್ದಾರೆ. ನೀವು ಭ್ರಷ್ಟಾಚಾರದ ಕಟ್ಟಾ ವಿರೋಧಿಯಾಗಿದ್ದರೆ ಖಂಡಿತ ಬನ್ನಿ ಎಂದು ಆಯೋಜಕರು ನಾಗರಿಕರನ್ನು ಕಳಕಳಿಯಿಂದ ಕೇಳಿದ್ದಾರೆ.