ಆದಿಚುಂಚನಗಿರಿಶ್ರೀ ಮೇಲೆ ಲೋಕಾಯುಕ್ತಕ್ಕೆ ದೂರು
ಬಾಲಗಂಗಾಧರನಾಥ ಸ್ವಾಮೀಜಿ ಮೇಲೆ ಲಕ್ಷ್ಮಿನಾರಾಯಣ ಎಂಬುವರು ಲೋಕಾಯುಕ್ತ ಕೋರ್ಟಿಗೆ ಖಾಸಗಿ ದೂರು ಸಲ್ಲಿಸಿದ್ದಾರೆ. ಅಲ್ಲದೆ, 23 ಕ್ಕೂ ಅಧಿಕ ಜನರ ಮೇಲೆ ದೂರು ದಾಖಲಾಗಿಸಲಾಗಿದೆ. ಆರಂಭದಲ್ಲಿ ಆರೋಪ ಪಟ್ಟಿಯಲ್ಲಿ ಬಿಬಿಎಂಪಿ ಅಧಿಕಾರಿ ಶಂಕರಲಿಂಗೇ ಗೌಡ ಅವರ ಹೆಸರು ಕಾಣಿಸಿಕೊಂಡಿತ್ತು.
ಆದರೆ, ದೂರುದಾರ ಲಕ್ಷ್ಮಿನಾರಾಯಣ ಅವರು ಕೊನೆ ಕ್ಷಣದಲ್ಲಿ ಪಟ್ಟಿ ತಿದ್ದುಪಡಿ ಮಾಡಿ ಆರೋಪಿಗಳ ಪಟ್ಟಿ ಕೋರ್ಟಿಗೆ ಸಲ್ಲಿಸಿದರು.
ಲಕ್ಷ್ಮಿನಾರಾಯಣ ಅವರು ನೀಡಿದ ದೂರನ್ನು ಸ್ವೀಕರಿಸಿ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಮೇ.29ಕ್ಕೆ ಮುಂದೂಡಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಹುಳಿಮಾವು ಬಳಿ ದೇವಾಲಯ ನಿರ್ಮಾಣಕ್ಕೆ ಸರ್ಕಾರದಿಂದ ರಾಮಲಿಂಗೇಶ್ವರ ಟ್ರಸ್ಟ್ ಗೆ 15 ಎಕರೆ ಭೂಮಿ ನೀಡಲಾಗಿತ್ತು.
ಅದರೆ ರಾಮಲಿಂಗೇಶ್ವರ ಟ್ರಸ್ಟ್ ನಿಂದ ಸದರಿ ಭೂಮಿಯನ್ನು ಪಡೆದ ಆದಿಚುಂಚನಗಿರಿ ಸ್ವಾಮೀಜಿ ಅವರು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಕಾನೂನು ಬಾಹಿರವಾಗಿ ಟ್ರಸ್ಟ್ ನಿಂದ ಭೂಮಿ ವರ್ಗಾವಣೆಯಾಗಿದೆ. ಈ ಅಕ್ರಮದಲ್ಲಿ ಸುಮಾರು 27ಕ್ಕೂ ಹೆಚ್ಚು ಜನ ಆರೋಪಿಗಳಿದ್ದಾರೆ. 5 ಜನ ಐಎಎಸ್ ಅಧಿಕಾರಿಗಳಿದ್ದಾರೆ ಎಂದು ತಿಳಿದು ಬಂದಿದೆ.
ಆದಿಚುಂಚನಗಿರಿ ಟ್ರಸ್ಟ್ ನಿಂದ ಶಾಲೆ, ಆಸ್ಪತ್ರೆ, ಕಾಲೇಜುಗಳನ್ನು ನಡೆಸಿಕೊಂಡು ಬರಲಾಗಿದ್ದು, ಎಲ್ಲೂ ಅಕ್ರಮ ನಡೆದಿಲ್ಲ. ಈ ಆರೋಪದಲ್ಲಿ ಹುರುಳಿಲ್ಲ ಎಂದು ಸ್ವಾಮೀಜಿ ಆಪ್ತರು ಪ್ರತಿಕ್ರಿಯಿಸಿದ್ದಾರೆ.