ಪ್ರೀತಿ ಕೊಂದ ಕೊಲೆಗಾರ್ತಿ ಜೆನ್ನಿ ಸಿಕ್ಕಿಬಿದ್ದಳು
ಫೇಸ್ ಬುಕ್ ಮೂಲಕ ಪರಿಚಯವಾಗಿದ್ದ ರಾಜು (ಶ್ರೀರಾಘ್)ನನ್ನು ಮೋಹದ ಬಲೆಗೆ ಬೀಳಿಸಿ ಫ್ಲರ್ಟ್ ಮಾಡಿದ ಜೆನ್ನಿಫರ್ ತನ್ನ ಅಸಲಿ ಕತೆಯನ್ನು ಮಹದೇವಪುರ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾಳೆ.
ಜೆನ್ನಿ ಎಂಬಿಎ ಅಲ್ಲ ಎಸ್ಸೆಸೆಲ್ಸಿ: ಅಸಲಿಗೆ ಪ್ರೀತಿ ಕೊಂದ ಕೊಲೆಗಾರ್ತಿ ಹೆಸರು ಜೆನ್ನಿಫರ್ ಅಲ್ಲ. ಶ್ರೀರಾಜುಗೆ ಬೇರೆಯೊಬ್ಬ ಹುಡುಗಿಯ ಫೋಟೊ ಕಳಿಸಿದಂತೆ ತನ್ನ ಹೆಸರನ್ನು ಸಹ ಈಕೆ ಮರೆಮಾಚಿದ್ದಳು.
ಜೆನ್ನಿಫರ್ ನಿಜವಾದ ಹೆಸರು ಎಲಿಜಬೆತ್. ಬ್ಯಾಂಕ್ ವೊಂದರ ಕಾಲ್ ಸೆಂಟರ್ ನಲ್ಲಿ ಟೆಲಿ ಕಾಲರ್ ಆಗಿ ಉದ್ಯೋಗ ನಡೆಸುತ್ತಿರುವ ಈಕೆ ಶ್ರೀರಾಜ್ ಜೊತೆ ಹೇಳಿದ್ದೆಲ್ಲವೂ ಅಪ್ಪಟ ಸುಳ್ಳು.
ಹುಡುಗಿಯರು ಫರ್ಟ್ ಮಾಡುತ್ತಾರೆ ಹುಷಾರ್ : ಕೇವಲ ಎಸ್ ಎಸ್ ಎಲ್ ಸಿ ಓದಿರುವ ಎಲಿಜಬೆತ್, ತಾನು ಎಂಬಿಎ ಓದಿದ್ದೇನೆ. ಐಬಿಎಂನಲ್ಲಿ ಉದ್ಯೋಗ ಎಂದು ಹೇಳಿಕೊಂಡು ರಾಜುವನ್ನು ಬಲೆಗೆ ಹಾಕಿಕೊಂಡಿದ್ದಳು. ಟೆಲಿ ಕಾಲರ್ ಆಗಿ ಮಧುರ ದನಿ ಹೊಂದಿದ್ದ ಎಲ್ಸಿ(ಎಲಿಜಬೆತ್) ಹುಡುಗಾಟಕ್ಕೆ ರಾಜು ಜೊತೆ ಮಾತುಕತೆಗೆ ಇಳಿದಳು.
ಯಾವುದೋ ಪರ್ಸನಲ್ ಲೋನ್ ಸಂಬಂಧಕ್ಕೆ ಮಾತುಕತೆ ಆರಂಭವಾಗಿದ್ದು, ಪ್ರೇಮಕ್ಕೆ ತಿರುಗಿಬಿಟ್ಟಿತ್ತು. ಎಲ್ಸಿಗೆ ಸರಿ ಸುಮಾರು 6 ಸಾವಿರಕ್ಕೂ ಹೆಚ್ಚು ಎಸ್ಎಂಎಸ್ ಗಳಿಸಿದ್ದ ರಾಜು, ಫೇಸ್ ಬುಕ್ ನಲ್ಲಿ ಆಕೆ ಕಳಿಸಿದ್ದ ನಕಲಿ ಫೋಟೋವನ್ನೇ ಅಸಲಿ ಎಂದು ತಿಳಿದು ಖುಷಿ ಪಟ್ಟಿದ್ದ.
ಎಲ್ಸಿ(ಜೆನ್ನಿ) ಫ್ಲರ್ಟ್ ಮಾಡುತ್ತಿದ್ದಾಳೆ ಎಂಬ ಸಣ್ಣ ಸುಳಿವು ಕೂಡಾ ರಾಜುಗೆ ಸಿಕ್ಕಿರಲಿಲ್ಲ. ರಾಜು ದಿನೇದಿನೇ ತನ್ನನ್ನು ಇಷ್ಟಪಡುವುದು ಹೆಚ್ಚಾಗತೊಡಗಿದ್ದಂತೆ ಎಚ್ಚೆತ್ತಕೊಂಡ ಎಲ್ಸಿ ಆತನ ಪ್ರೇಮವನ್ನು ನಿರಾಕರಿಸಿದಳು. ಒಮ್ಮೆ ಕೂಡಾ ಭೇಟಿಯಾಗುವ ಅವಕಾಶ ನೀಡಲಿಲ್ಲ.
ಎಲ್ಸಿ ತನ್ನ ನಿಜಸ್ವರೂಪ ಹೇಳಿದ್ದರೆ ರಾಜು ಸಣ್ಣ ಶಾಕ್ ಅನುಭವಿಸಿ ಬದುಕಿರುತ್ತಿದ್ದನೋ ಏನೋ ಆದರೆ, ಎಲ್ಸಿ ಮತ್ತೆ ಎಡವಿದಳು. ಡೇವಿಡ್ ಎಂಬುವರ ಜೊತೆ ನನ್ನ ನಿಶ್ಚಿತಾರ್ಥವಾಗಿದೆ ಮುಂದಿನ ತಿಂಗಳು ನಾವು ಇಂಗ್ಲೆಂಡ್ ಗೆ ಹೋಗುತ್ತಿದ್ದೇವೆ ಎಂದು ಮತ್ತೊಂದು ಸುಳ್ಳು ಪೋಣಿಸಿಬಿಟ್ಟಳು.
ನಿಶ್ಚಿತಾರ್ಥದ ವಿಷಯ ತಿಳಿದ ಮೇಲೆ ರಾಜು ಕಂಗಾಲಾಗಿ 25ಕ್ಕೂ ಅಧಿಕ ಇಮೇಲ್ ಕಳಿಸಿದ. ಮತ್ತೆ ಮತ್ತೆ ಕರೆ ಮಾಡಲು ಯತ್ನಿಸಿ ವಿಫಲನಾಗಿ ಎಸ್ ಎಂಎಸ್ ಕಳಿಸಿದ. ಆದರೆ ಆಕೆ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ಪರಿಣಾಮ ಟೆಕ್ಕಿ ರಾಜು ವಿಚಿತ್ರವಾಗಿ ತನ್ನ ಜೀವನಕ್ಕೆ ಅಂತ್ಯ ಹಾಡಿಕೊಂಡು ಬಿಟ್ಟ.
ಈ ಪ್ರಕರಣ ಬೇಧಿಸಿದ ಮಹದೇವ ಪುರ ಠಾಣೆ ಪೊಲೀಸರನ್ನು ಶ್ಲಾಘಿಸಿದ ಎಸಿಪಿ ನರಸಿಂಹಯ್ಯ ಅವರು, ಎಲಿಜಬೆತ್ ವಿಚಾರಣೆ ನಂತರ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದಿದ್ದಾರೆ.