ಶೋಭಾ ಮೇಡಂ, ಇವರೇ ಕಣ್ರಿ ಅಹ್ಮದ್ ಪಟೇಲ್!
ಸೋನಿಯಾ ಗಾಂಧಿ ಅವರನ್ನು ಎಂದೋ, ದೂರದಲ್ಲೆಲ್ಲೋ ಇಣುಕಿ ನೋಡ್ಕೊಂಡು ಬಂದು 'ಸೋನಿಯಾಜೀಗೆ ನಾನು ತುಂಬಾ ಹತ್ತಿರ' ಎಂದು ಬೊಗಳೆ ಬಿಡುವ, ಈಗಂತೂ ಬಿಡಿ ಛಾನ್ಸ್ ಸಿಕ್ಕರೆ ಸಾಕು ಟಿವಿ ಕ್ಯಾಮರಾಗಳಿಗೆ pose ಕೊಡುವ ರಾಜಕೀಯ ನಾಯಕರ ಮಧ್ಯೆ ಅಹಮದ್ ಪಟೇಲ್ ತುಂಬಾ ಎತ್ತರವಾಗಿ, ಎದ್ದುಕಾಣುತ್ತಾರೆ.
ಆದರೆ ಅವರಾಗಿ ಎಂದೂ, ಢಾಳಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಹಾಗಾಗಿಯೇ ನಮ್ಮ ಶೋಭಾ ಮೇಡಂ 'ಅವರ ಫೋಟೋ ಸಹ ನೋಡಿಲ್ಲ ಮಾರಾಯಾ' ಎಂದು ಅಲವತ್ತುಕೊಂಡಿರುವುದು.
ಹಾಗಾದ್ರೆ ಯಾರು ಈ ಕಾಂಗ್ರೆಸ್ ಪಕ್ಷದ ಸರ್ವಶಕ್ತ ಅಹಮದ್ ಭಾಯ್!? ಮೊಹಮದ್ ಇಷಾಕ್ ಪಟೇಲ್ ಮತ್ತು ಹವಾಬೆನ್ ಮೊಹಮದ್ ಭಾಯ್ ಪಟೇಲ್ ಕೃಷಿಕ ದಂಪತಿಯ ಸುಪುತ್ರ. ಜನನ: 21-08-1949. ಸ್ಥಳ: ಗುಜರಾತಿನ ಭರೂಚ್ ಜಿಲ್ಲೆಯ ಅಂಕಲೇಶ್ವರ. ಶಿಕ್ಷಣ: ಬಿಎಸ್ಸಿ.
1977ರಲ್ಲಿ ಕಾಂಗ್ರೆಸ್ಸಿನಲ್ಲಿ ಕಾಣಿಸಿಕೊಂಡ ಅಹ್ಮದ್ ಪಟೇಲ್, ಕಾತಾಂತರದಲ್ಲಿ ಕ್ಷಿಪ್ರಗತಿಯಲ್ಲಿ ಪ್ರವರ್ಧಮಾನಕ್ಕೆ ಬಂದವರು. ಅವರ 'ಕೈ' ಹಿಡಿದಿದ್ದು ಕಾಂಗ್ರೆಸ್ ಪಕ್ಷದೆಡೆಗಿನ ಅಂದರೆ ಇಂದಿರಾ ಕುಟುಂಬಕ್ಕೆ ಅವರು ತೋರಿದ ಅಖಂಡ, ಅಚಲ ನಿಷ್ಠೆ. ಹೌದು ಅದೊಂದೇ ಅವರನ್ನು ಈ ಹಂತಕ್ಕೆ ಕರೆತಂದಿರುವುದು ಎಂಬುದನ್ನು ಯಾವುದೇ ಕಾಂಗ್ರೆಸ್ ಬ್ಲಾಕ್ ಕಾರ್ಯಕರ್ತನೂ ಹೇಳುವ ಮಾತು.
ಮಧ್ಯೆ ಮಧ್ಯೆ ಲೋಕಸಭೆ, ರಾಜ್ಯಸಭೆಗೆ ಆಯ್ಕೆಯಾಗುತ್ತಾ ಬಂದರು. ಇಷ್ಟೆಲ್ಲ ನಿಷ್ಠೆಯಿದ್ದರೂ ಮತ್ಯಾಕೆ ಅವರು ಕೇಂದ್ರದಲ್ಲಿ ಸಚಿವ ಸ್ಥಾನ ಪಡೆಯಲಿಲ್ಲ ಎಂಬುದಕ್ಕೆ ಮುಂದಿದೆ ಉತ್ತರ. ಅದಕ್ಕೂ ಮುನ್ನ, ಕ್ರಿಕೆಟ್ ಮತ್ತು ಬ್ಯಾಡ್ಮಿಂಟನ್ ಆಟಗಳಲ್ಲಿ ಇವರಿಗೆ ತುಸು ಆಸಕ್ತಿಯಿದೆ. ಹತ್ತಾರು ವಿದೇಶಗಳಿಗೆ ಅನೇಕ ನಿಯೋಗಗಳನ್ನು ಪ್ರತಿನಿಧಿಸಿ, ಆಗಾಗ ಹೋಗಿಬಂದಿದ್ದಾರೆ.
ಮೃದುಭಾಷಿ ಅಹಮದ್, ಗುಜರಾತಿನಿಂದ ಲೋಕಸಭೆ ಸದಸ್ಯರಾಗಿ ಆಯ್ಕೆಗೊಂಡ ಎರಡನೆಯ ಮುಸ್ಲಿಂ ನಾಯಕ. ಮೊದಲನೆಯವರು ಎಷಾನ್ ಜಫ್ರಿ. ಆರಂಭದಲ್ಲೇ ಯುವಕ ಅಹಮದ್ ಪಟೇಲ್ ಅವರು ಸಂಜಯ್ ಗಾಂಧಿ ಪಟಾಲಂನಲ್ಲಿ ಕಾಣಿಸಿಕೊಂಡರು. ಬಳಿಕ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಇದೀಗ ಸೋನಿಯಾ ಗಾಂಧಿಯೆಡೆಗಿನ ಅವರ ನಿಷ್ಠೆ unmatchable.
ಅಹ್ಮದ್ ಪಟೇಲ್ ಹೇಳಿ ಕೇಳಿ ಮುಸ್ಲಿಂ ಸಮುದಾಯದವರು. ಅಲ್ಲಾ ಪರಮ ಭಕ್ತ ಅಹಮದ್ ಪ್ರತಿ ಶುಕ್ರವಾರ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಾರೆ. ಆದರೆ ಒಂದೇ ಮಸೀದಿಯೊಂದಿಗೆ ಅವರು ಗುರುತಿಸಿಕೊಂಡಿಲ್ಲ. ಏಕೆಂದರೆ ತಮ್ಮ ಬಾಂಧವರು ಏನಾದರೊಂದು petition ಇಡುತ್ತಾರೆ ಎಂಬ ಸಣ್ಣ ಭಯ ಇವರಿಗೆ. ಹಾಗಾಗಿ ಯಾವುದೋ ಒಂದು ಮಸೀದಿಗೆ ತೆರಳಿ, ಗಪ್ ಚುಪ್ ಆಗಿ ಪ್ರಾರ್ಥನೆ ಸಲ್ಲಿಸಿ, ಮರಳುತ್ತಾರೆ. ಅಹಮದ್ ಪಟೇಲ್ ಅವರು ಪಕ್ಷದ fund-raiser. ಆದರೆ ಅವರದು ಶುದ್ಧಾನುಶುದ್ಧ 'ಹಸ್ತ'!
ಕೇಂದ್ರ ಸಚಿವ ಸ್ಥಾನ ಅಲಂಕರಿಸಿ ಎಂದು ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ದುಂಬಾಲು ಬಿದ್ದರೂ ಅಹಮದ್ ಪಟೇಲ್ ನಯ ವಿನಯದಿಂದ ಒಲ್ಲೆ ಅಂದಿದ್ದರು. ಅದು ಪಕ್ಷದಲ್ಲಿ ಅವರ ಸ್ಥಾನವನ್ನು ಮತ್ತಷ್ಟು ದೃಢಗೊಳಿಸಿತು. ಅದೇ ಈಗ ಸೋನಿಯಾ ನಿಷ್ಠೆಗೆ ರಹದಾರಿಯಾಗಿದೆ. CP ಸೋನಿಯಾರ gatekeeper ಆಗಿ ಮಾರ್ಪಟ್ಟಿದ್ದಾರೆ. ಸದಾ ಚಟುವಟಿಕೆಯಿಂದ ಕೂಡಿರುವ, ಪಕ್ಷ ಎದುರಿಸುವ ಯಾವುದೇ ಸಂಕಷ್ಟವನ್ನು ಸುಲಭೋಪಾಯವಾಗಿ ನಿವಾರಿಸುವ ಚಾಕಚಕತ್ಯೆ Ahmedbhaiಗೆ ಒಲಿದಿದೆ.
ಒಂದೇ ರಸಾಭಾಸವೆಂದರೆ ಸೋನಿಯಾ ಅವರ ಆಪ್ತ ಕಾರ್ಯದರ್ಶಿ ವಿ. ಜಾರ್ಜ್ ಜತೆ ವೈಮನಸ್ಯ ಬೆಳೆದು ಪಕ್ಷದ ಸರ್ವಶಕ್ತ treasurer ಸ್ಥಾನಕ್ಕೆ ರಾಜೀನಾಮೆ ಒಗಾಯಿಸಿದ್ದರು. ಸೋನಿಯಾ ಸಹ ಅಹಮದ್ ಗೆ ಬಾಗಿಲು ಬಂದ್ ಮಾಡಿದರು. ಆಗ ಅಹಮದ್ ಪಟೇಲರ ಬಾಯಿ ತೆರೆದುಕೊಂಡಿತು. ಬಾಯಿಗೆ ಬಂದಂತೆ ಮಾತನಾಡಿದರು. ಆದರೆ ಅದು ಕೇವಲ ಮೂರು ತಿಂಗಳ ಪರಿತ್ಯಕ್ತತೆ. ಹಸುವನ್ನರಸಿ ಅಂಬಾ ಎನ್ನುವ ಕರುವಿನಂತೆ ಅಹಮದ್ ಪಟೇಲ್ ಮತ್ತೆ ಸೋನಿಯಾಜೀ ಮಡಿಲು ಸೇರಿಕೊಂಡರು... ಇದುವರೆಗೆ ಕಾಂಗ್ರೆಸ್ ಕೊಟ್ಟಿಗೆ ಬಿಟ್ಟುಬಂದಿಲ್ಲ.