ಕೇರಳ ಮೂಲದ ಟೆಕ್ಕಿ ಬೆಂಗಳೂರಿನಲ್ಲಿ ಕೊಲೆ
ವೈಟ್ ಫೀಲ್ಡ್ ನಲ್ಲಿರುವ ಪ್ರತಿಷ್ಠಿತ ಕಂಪನಿ ಎಚ್ ಪಿಯಲ್ಲಿ ಉದ್ಯೋಗಿಯಾಗಿದ್ದ ಕೇರಳದ ಕಲ್ಲಿಕೋಟೆ ಮೂಲದ ಶ್ರೀರಾಜು ಎಇಸಿಎಸ್ ಲೇಔಟ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ವೋಕ್ಸ್ ವಾಗನ್ ಕಾರು ತೆಗೆದುಕೊಂಡು ಕಳೆದ ರಾತ್ರಿ(ಮೇ.21) ತಮ್ಮ ದೊಡ್ಡಮ್ಮನ ಮನೆಗೆ ಊಟಕ್ಕೆ ಹೋಗಿದ್ದರು. ಊಟ ಮುಗಿಸಿಕೊಂಡು ರಾತ್ರಿ ಸುಮಾರು 11 ಗಂಟೆಗೆ ಎಇಸಿಎಸ್ ಲೇಔಟ್ ನ ಪಾರ್ಕ್ ಬಳಿ ಬರುತ್ತಿದ್ದಾಗ ದುಷ್ಕರ್ಮಿಗಳು ಅಡ್ಡಗಡ್ಡಿ ಸೆಲೊ ಪಿನ್ ಟೇಪ್ ನಿಂದ ಶ್ರೀರಾಜುರನ್ನು ಬಂಧಿಸಿ, ಮುಖಕ್ಕೆ ಪ್ಲಾಸ್ಟಿಕ್ ಹಾಕಿ ಉಸಿರುಗಟ್ಟಿಸಿ ಸಾಯಿಸಲಾಗಿದೆ.
ಎಇಸಿಎಸ್ ಲೇಔಟ್ ಬಳಿ ನಿಂತಿದ್ದ KA 53 Z 6153 ನಂಬರ್ ಪ್ಲೇಟ್ ಇರುವ ಕಾರಿನ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ದಾವಿಸಿದ ಪೊಲೀಸರು ಹಿಂಬದಿ ಸೀಟಿನಲ್ಲಿದ್ದ ರಾಜು ಶವ ಕಂಡಿದ್ದಾರೆ.
ರಾಜು ಮುಖವನ್ನು ಪ್ಲಾಸ್ಟಕ್ ಕವರ್ ನಿಂದ ಮುಚ್ಚಲಾಗಿದೆ. ಕೈ ಕಾಲುಗಳನ್ನು ಪ್ಲಾಸ್ಟರ್ ನಿಂದ ಬಿಗಿಯಲಾಗಿದೆ. ಹಿಂದಿನ ಸೀಟಿನಲ್ಲಿ ಒರಗಿಕೊಂಡಂತೆ ಇರುವ ಭಂಗಿಯಲ್ಲಿರುವ ರಾಜು ಅವರಿಗ ಸೀಟ್ ಬೆಲ್ಟ್ ಕೂಡಾ ಹಾಕಲಾಗಿದೆ. ಉಸಿರುಗಟ್ಟಿಸಿ ಸಾಯಿಸಿರುವ ಶಂಕೆ ವ್ಯಕ್ತವಾಗಿದೆ.
ಆದರೆ, ರಾಜು ಅವರನ್ನು ಯಾರು ಸಾಯಿಸಿದರು? ಏತಕ್ಕೆ ಸಾಯಿಸಿದರು? ಕೊಲೆ ಹಿಂದಿನ ಉದ್ದೇಶವೇನು? ಇನ್ನೂ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಮಹದೇವಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಡಿಸಿಪಿ ಕೃಷ್ಣಭಟ್ ಹೇಳಿದ್ದಾರೆ.