ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಡಾ.ಅಶ್ವಿನ್ ನಾಮಪತ್ರ
ನಾಮಪತ್ರ ಸಲ್ಲಿಸುವ ವೇಳೆ ಪಕ್ಷದ ರಾಜ್ಯಾಧ್ಯಕ್ಷೆ ಕೆ. ರಾಮಲಕ್ಷ್ಮೀ, ರಾಜ್ಯ ಕಾರ್ಯದರ್ಶಿ ಶಾಂತಲಾ ದಾಮ್ಲೆ, ಬೆಂಗಳೂರು ನಗರಾಧ್ಯಕ್ಷೆ ಡಾ. ಮೀನಾಕ್ಷಿ ಭರತ್, ನಗರ ಕಾರ್ಯದರ್ಶಿ ಯೋಗಯ್ಯ ಮತ್ತು ಪಕ್ಷದ ಇತರ ಕಾರ್ಯಕರ್ತರು, ಬೆಂಬಲಿಗರು ಹಾಜರಿದ್ದರು.
ಖಗೋಳ ಹಾಗೂ ವಾಯುಮಂಡಲ ವಿಜ್ಞಾನಿಯಾಗಿ ತರಬೇತಿ ಪಡೆದಿರುವ ಡಾ. ಅಶ್ವಿನ್ ಮಹೇಶ್ ಅಮೆರಿಕದ ಪ್ರತಿಷ್ಠಿತ ನಾಸಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಡಾ. ಮಹೇಶ್ ತಮ್ಮ ವೃತ್ತಿ ಜೀವನವನ್ನು ನಕ್ಷತ್ರಗಳ ರಚನೆ, ಜಾಗತಿಕ ಹವಾಮಾನ ಬದಲಾವಣೆ, ನಗರೀಕರಣ ಹಾಗೂ ಸಾರ್ವಜನಿಕ ಸಾರಿಗೆ ಮುಂತಾದ ವಿಷಯಗಳ ಕುರಿತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದರು. ಸದ್ಯ ಅವರು ಸಂಶೋಧನಕಾರರಾಗಿ Centre of Excellence in Urban Governance, IIMB, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ABIDE ಸದಸ್ಯರಾಗಿ ಡಾ. ಅಶ್ವಿನ್ ಮಹೇಶ್ ಅವರು ಬೆಂಗಳೂರಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಪ್ರಮುಖವಾಗಿ ನಗರ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಇವರು ಪರಿಚಯಿಸಿದ ಬಿಗ್10/ಬಿಗ್ಸರ್ಕಲ್ ಬಸ್ಸುಗಳು ಜನಪ್ರಿಯವಾಗಿವೆ. ಬೆಂಗಳೂರು ಸಂಚಾರ ನಿರ್ವಹಣೆಯನ್ನು ವ್ಯವಸ್ಥಿತವಾಗಿ ನಡೆಸಲು ದೇಶದಲ್ಲೇ ಪ್ರಥಮ ಬಾರಿಗೆ ಉತ್ಕೃಷ್ಟ ಸಂಚಾರ ನಿರ್ವಹಣಾ ಕೊಠಡಿಯನ್ನು ಸ್ಥಾಪಿಸುವಲ್ಲಿ ನೆರವಾಗಿದ್ದಾರೆ ಮತ್ತು ತಮ್ಮ ಮ್ಯಾಪಯುನಿಟಿ ಕಂಪನಿಯಿಂದ ಮಾಹಿತಿ ತಂತ್ರಜ್ಞಾನದ ನೆರವನ್ನು ನೀಡಿದ್ದಾರೆ. ಇವರ ಸಾಮಾಜಿಕ ಕೊಡುಗೆಯನ್ನು ಗುರುತಿಸಿ 2009ರಲ್ಲಿ ಸಾಮಾಜಿಕ ಉದ್ಯಮಶೀಲತೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಅಶೋಕಾ ಫೇಲೊ ಗೌರವ ದೊರೆತಿದೆ.
ಡಾ. ಅಶ್ವಿನ್ ಅವರು ಭ್ರಷ್ಟಾಚಾರದ ವಿರುದ್ಧ ಭಾರತ (India Against Corruption)ದಲ್ಲಿ ಕರ್ನಾಟಕದ ಧ್ವನಿಯಾಗಿ ಹೋರಾಟ ಮಾಡಿದ್ದಾರೆ ಮತ್ತು ಕರ್ನಾಟಕದಲ್ಲಿ "ಭ್ರಷ್ಟಾಚಾರ ಸಾಕು" ಚಳವಳಿಯನ್ನು ಪ್ರಾರಂಭಿಸಿದವರಲ್ಲಿ ಒಬ್ಬರಾಗಿದ್ದಾರೆ. ಬಡ ಮಕ್ಕಳಿಗೆ ತಾಂತ್ರಿಕ ಕೌಶಲ್ಯ ತರಬೇತಿ ನೀಡುವ ಯೋಜನೆಗಳಿಗೆ ಸಹಕಾರ ನೀಡುತ್ತಿದ್ದಾರೆ.
ಅಶ್ವಿನ್ ಮಹೇಶ್ ಅವರನ್ನು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಇನ್ಫೋಸಿಸ್ ಮಾಜಿ ನಿರ್ದೇಶಕ ಮೋಹನದಾಸ್ ಪೈ, ಬಯೋಕಾನ್ನ ಕಿರಣ್ ಮಜುಮದಾರ್ ಷಾ, "ಲೀಡ್ ಇಂಡಿಯಾ" ವಿಜೇತ ಆರ್.ಕೆ.ಮಿಶ್ರಾ, ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಮ್.ಎನ್. ವೆಂಕಟಾಚಲಯ್ಯ, ಕನ್ನಡ ಚಲನಚಿತ್ರ ನಟ ರಮೇಶ್ ಅರವಿಂದ್ ಹಾಗೂ ಇನ್ನೂ ಹಲವಾರು ಗಣ್ಯರು ಬೆಂಬಲಿಸಿದ್ದಾರೆ.