ಯಡಿಯೂರಪ್ಪ ಬಿಜೆಪಿಗೆ ಗೇಲ್ ಇದ್ದಂತೆ!
ಎಲ್ಲಿಯ ಸಿಕ್ಸರ್ ರಾಜಾ, ಎಲ್ಲಿಯ ಯಡಿಯೂರಪ್ಪಾ? ಅಕಸ್ಮಾತ್ ಈ ಹೋಲಿಕೆಯ ವಿಷಯ ಗೇಲ್ ಕಿವಿಗೆ ಬಿದ್ದರೆ ಅವರ ಪ್ರತಿಕ್ರಿಯೆ ಏನಿರಬಹದು!?
ಆದರೂ ಇಂತಹ ಹೋಲಿಕೆ ನೀಡಿ ಕೃತಾರ್ಥರಾಗಿರುವವರು ಯಡಿಯೂರಪ್ಪನವರ ಕಟ್ಟಾ ಬೆಂಬಲಿಗ ಉಮೇಶ್ ವಿಶ್ವನಾಥ್ ಕತ್ತಿ. ಇವರು ಬೆಳಗಾವಿಯ ಹುಕ್ಕೇರಿ ವೀಧಾನಸಭಾ ಕ್ಷೇತ್ರದ ಹಾಲಿ ಶಾಸಕ. ಯಾವುದೇ ಪಕ್ಷವನ್ನು ಪ್ರತಿನಿಧಿಸಿದರೂ ಚುನಾವಣೆಗಳಲ್ಲಿ ಸ್ವತಃ ಗೆಲುವಿನ ನಾಗಾಲೋಟದಲ್ಲಿರುವ ಜನಪ್ರತಿನಿಧಿ. ಇವರು ಯಡಿಯೂರಪ್ಪ ಪಾಳಯದಲ್ಲಿ ಚಟುವಟಿಕೆಗಳ ಕುರಿತು Deccan Chronicle ಆಂಗ್ಲ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಯಡಿಯೂರಪ್ಪ ಅವರನ್ನು ಗೇಲ್ ಗೆ ಹೋಲಿಸಿದ್ದಾರೆ.
ಸಂದರ್ಶನದ ವೇಳೆ, ಪಕ್ಷದಲ್ಲಿ ಯಾವುದೇ ಒಳಜಗಳವಿಲ್ಲ ಎಂದಿರುವ ಉಮೇಶ್ ಕತ್ತಿ, ಯಡಿಯೂರಪ್ಪನವರನ್ನು ಹಾಡಿಹೊಗಳಿದ್ದಾರೆ. 'ಮುಖ್ಯಮಂತ್ರಿ ಯಡಿಯೂರಪ್ಪ' ಅವರ ಸಾಧನೆಗಳನ್ನು ಕೊಂಡಾಡಿದ್ದಾರೆ. ಅಕ್ರಮ ಗಣಿಗಾರಿಕೆಯಲ್ಲಿ ತಪ್ಪಾಗಿ ಅವರನ್ನು ಸಿಲುಕಿಸಲಾಗಿದೆ. ಇದು ಕಾಂಗ್ರೆಸ್ ಮತ್ತು ಕೆಲ ಬಿಜೆಪಿ ನಾಯಕರ ಜಂಟಿ ಕಾರ್ಯಾಚರಣೆಯ ಫಲ. ಅದಕ್ಕಿಂತ ಭಾರಿ ತಪ್ಪು ಮಾಡಿದ ನಾಯಕರು ಸ್ವತಂತ್ರವಾಗಿ ಓಡಾಡಿಕೊಂಡಿರುವಾಗ ನಮ್ಮ ನಾಯಕ ಯಡಿಯೂರಪ್ಪಗೆ ಏಕೆ ಈ ಶಿಕ್ಷೆ ಎಂದೂ ಪ್ರಶ್ನಿಸಿದ್ದಾರೆ.
ಕ್ರಿಕೆಟ್ ಭಾಷೆಯಲ್ಲಿ ಹೇಳುವುದಾದರೆ ಕ್ರಿಸ್ ಗೇಲ್ ಅವರಂತೆ ಬಿಜೆಪಿಗೆ ಯಡಿಯೂರಪ್ಪನವರೇ ಮ್ಯಾಚ್ ವಿನ್ನರ್ ಎಂದು ಉಮೇಶ್ ಕತ್ತಿ ಘಂಟಾಘೋಷವಾಗಿ ಹೇಳಿದ್ದಾರೆ.
ಶೋಭಾ ಅಂತಹವರಲ್ಲ: ಪಕ್ಷದಲ್ಲಿನ ಎಲ್ಲ ಆಗುಹೋಗುಗಗಳಿಗೂ ಸಚಿವೆ ಶೋಭಾ ಕರಂದ್ಲಾಜೆ ಅವರ ಹೇತುವಾಗಿದ್ದಾರೆ. ಯಡಿಯೂರಪ್ಪನವರಿಗೆ ಹತ್ತಿರವಾಗಿರುವ ಶೋಭಾ ಪಕ್ಷದೊಳಗಿನ ಬಿಕ್ಕಟ್ಟಿಗೆ ಕಾರಣವಾಗುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಉಮೇಶ್ ಕತ್ತಿ, ಆ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಬದಲಿಗೆ ಪಕ್ಷದಲ್ಲಿನ ಕೆಲ ಹಿರಿ ನಾಯಕರೇ ಇಂದಿನ ಬಿಕ್ಕಟ್ಟಿನ ಸೃಷ್ಟಿಕರ್ತರು. ಪಕ್ಷದ ಹೈಕಮಾಂಡ್ ಸಕಾಲದಲ್ಲಿ ಇದನ್ನು ಇತ್ಯರ್ಥಪಡಿಸಿದ್ದರೆ ಇಂತಹ ಪರಿಸ್ಥಿತಿಯೇ ಉದ್ಭವಿಸುತ್ತಿರಲಿಲ್ಲ ಎಂದು ಉಮೇಶ್ ಕತ್ತಿ ಹೇಳಿದ್ದಾರೆ.