ಮುಂದಿನ ಹೋರಾಟ ಡಿಕೆಶಿ ಗಣಿಗಾರಿಕೆ ವಿರುದ್ಧ
ಭ್ರಷ್ಟಾಚಾರದ ವಿರುದ್ಧ ನೇರವಾಗಿ ಸುಪ್ರೀಂಕೋರ್ಟ್ ಅಂಗಳದಲ್ಲೇ ಸಮರ ಸಾರಲು ಬಯಸುವ ಎಸ್ಆರ್ ಹಿರೇಮಠ್ ಅವರು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಅಕ್ರಮ ಗಣಿಗಾರಿಕೆ ಪಿತಾಮಹ ಎಂದು ಬಣ್ಣಿಸಿದ್ದು, ಮುಂದಿನ ವಾರ ಅವರ ವಿರುದ್ಧದ ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ತಿಳಿಸಿದ್ದಾರೆ. ಡಿಕೆಶಿ ಅಕ್ರಮ ಅದಿರು ಸಾಗಣೆ ಮಾಡಿದ ದಾಖಲೆಗಳು ಲಭ್ಯವಾಗಿದ್ದು ಸುಪ್ರೀಂಕೋರ್ಟ್ ಹಾಗೂ ಸಿಇಸಿಗೆ ಸಲ್ಲಿಸುವುದಾಗಿ ಹಿರೇಮಠ್ ಹೇಳಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ಹಾಗೂ ಡಿನೋಟಿಫಿಕೇಶನ್ ಮಾಡಿದ ಬಗ್ಗೆ ನಮ್ಮ ಹೋರಾಟ ವ್ಯಕ್ತಿ ಆಧಾರಿತವಲ್ಲ ಬದಲಾಗಿ ವಿಷಯಾಧಾರಿತ. ಆ ಪಕ್ಷ, ಈ ಪಕ್ಷ; ಯಡಿಯೂರಪ್ಪ, ಕುಮಾರಸ್ವಾಮಿ ಇಲ್ಲವೆ ಮತ್ಯಾರೋ ಎಂದು ನೋಡುವುದಿಲ್ಲ. ಯಡಿಯೂರಪ್ಪ ವಿರುದ್ಧ ತನಿಖೆ ಆರಂಭವಾಗಿದೆ. ಹಾಗೆಯೇ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ, ಧರಂಸಿಂಗ್, ಎಚ್.ಡಿ.ಕುಮಾರಸ್ವಾಮಿ ಇನ್ನಿತರರ ವಿರುದ್ಧವೂ ಕಾನೂನು ಹೋರಾಟ ಮುಂದುವರಿಯಲಿದೆ ಎಂದರು.
ರಾಜ್ಯದಲ್ಲಿ 2000ದಿಂದ 2010ರವರೆಗೆ ನಡೆದ ಅಕ್ರಮ ಗಣಿಗಾರಿಕೆ ಕುರಿತು ಸಮಗ್ರ ತನಿಖೆ ನಡೆಯಬೇಕೆಂದು ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. 1999-2006ರವರೆಗೆ ಅಕ್ರಮ ಅದಿರು ಸಾಗಣೆ ಹೆಚ್ಚಾಗಿದೆ. ಈ ಅವಧಿಯಲ್ಲಿ ಮುಖ್ಯಮಂತ್ರಿ ಆದವರ ವಿರುದ್ಧವೂ ವಿಚಾರಣೆ ನಡೆಯಲಿದೆ ಎಂದರು.
ಕಾಂಗ್ರೆಸ್ ಮುಖಂಡ ಡಿಕೆಶಿಯವರು ಅಕ್ರಮ ಗಣಿಯಿಂದ ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಂಡಿದ್ದಾರೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ರಾಚೇನಹಳ್ಳಿ, ನಾಗವಾರ ಡಿನೋಟಿಫಿಕೇಶನ್ನಲ್ಲಿ ಡಿಕೆಶಿ ಅಕ್ರಮ ಎಸಗಿದ್ದು, ಈ ಬಗ್ಗೆ ಸಂಪೂರ್ಣ ದಾಖಲೆ ತಮ್ಮ ಬಳಿ ಇದೆ ಎಂದಿದ್ದಾರೆ.
ದೆಹಲಿಯಲ್ಲಿ ಡಿಕೆಶಿ ಪ್ರತಿಕ್ರಿಯೆ: ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವವರು (ಹಿರೇಮಠ) ಜೆಡಿಎಸ್ ಪಕ್ಷದ ಪ್ರತಿನಿಧಿ ಎಂಬುದು ಗೊತ್ತಿದೆ. ಅವರು ನೀಡಿರುವ ದೂರಿನಂತೆ ನಾನು ಯಾವುದೇ ತನಿಖೆಗೂ ಸಿದ್ಧವಾಗಿದ್ದೇನೆ. ನಾನು ಯಾವುದೇ ಅಕ್ರಮ ಎಸಗಿಲ್ಲ ಎಂದು ಪ್ರಸ್ತುತ ದೆಹಲಿಯಲ್ಲಿರುವ ಡಿ.ಕೆ.ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.