ಯಡಿಯೂರಪ್ಪರನ್ನು ಪಕ್ಷದಿಂದ ಉಚ್ಚಾಟಿಸಲು ಆಗ್ರಹ
ಬಿಜೆಪಿಯ ಹಿರಿಯ ನಾಯಕರು ಹಿಂದೊಮ್ಮೆ ಮೈಸೂರಿನಲ್ಲಿ ಸಭೆ ಸೇರಿ, ಯಡಿಯೂರಪ್ಪ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಆಗ್ರಹಿಸಿದ್ದರು. ಈಗ ಇದೇ ರೀತಿ ಪತ್ರವನ್ನು ಪಕ್ಷದ ಕೆಲ ಹಿರಿಯ ನಾಯಕರು ಕಳಿಸಿದ್ದಾರೆ.
ಸದಾನಂದಗೌಡ, ಈಶ್ವರಪ್ಪ ಮತ್ತು ಅನಂತಕುಮಾರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಯಡಿಯೂರಪ್ಪ ಅವರ ವಿರುದ್ಧ ಕಠಿಣ ಕ್ರಮ ಏಕೆ ತೆಗೆದುಕೊಳ್ಳಬಾರದು. ಕೇವಲ ಒಬ್ಬ ಶಾಸಕನ ಮುಂದೆ ಒಂದು ರಾಷ್ಟ್ರೀಯ ಪಕ್ಷ ಮಂಡಿಯೂರಿ ಕೂರುವುದು ಸರಿಯೇ? ಎಂದು ಪ್ರಶ್ನಿಸಲಾಗಿದೆ.
ಯಡಿಯೂರಪ್ಪ ಬಣದ ಪ್ರಮುಖರಾದ ಸಚಿವ ಬೊಮ್ಮಾಯಿ, ಸೋಮಣ್ಣ, ಲೇಹರ್ ಸಿಂಗ್, ಶೋಭಾ ಮುಂತಾದವರು ದೆಹಲಿಯಲ್ಲಿ ಇನ್ನೊಂದು ಸುತ್ತಿನ ಮಾತುಕತೆ ನಡೆಸುತ್ತಿದ್ದಾರೆ.
ಈ ನಡುವೆ ಜಾರಕಿಹೊಳಿ ಬಣ ಕೂಡಾ ತಮ್ಮ ಅಹವಾಲುಗಳನ್ನು ಹೈಕಮಾಂಡ್ ಮುಂದಿಟ್ಟಿದೆ. ಯಡಿಯೂರಪ್ಪ ಅವರ ಸಿಬಿಐ ತನಿಖೆ ಮುಗಿಯುವ ತನಕ ಕಾಯುವುದರಲ್ಲಿ ಅರ್ಥವಿಲ್ಲ. ಆದಷ್ಟು ಬೇಗ ಸಂಪುಟ ವಿಸ್ತರಣೆಗೆ ಮನಸ್ಸು ಮಾಡಿ, ನಮ್ಮನ್ನು ಕಾಪಾಡಿ ಎಂದು ಜಾರಕಿಹೊಳಿ, ಆಸ್ನೋಟಿಕರ್ ಬಣದ ಸುಮಾರು 25 ಶಾಸಕರು ಮನವಿ ಮಾಡಿದ್ದಾರೆ.
ಒಂದು ವೇಳೆ ಸಿಬಿಐ ತಂಡ ಯಡಿಯೂರಪ್ಪ ಅವರನ್ನು ಬಂಧಿಸಿದ್ದೆ ಆದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗಲಿದೆ. ಇದರಿಂದ ಯಡಿಯೂರಪ್ಪ ಅವರನ್ನು ಉಚ್ಚಾಟಿಸುವುದೇ ಒಳಿತು ಎಂದು ಹೈಕಮಾಂಡ್ ನಲ್ಲಿ ಹಲವು ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ ನರೇಂದ್ರ ಮೋದಿ ಜೊತೆ ಶೀತಲ ಸಮರ ನಡೆಸುತ್ತಿರುವ ನಿತಿನ್ ಗಡ್ಕರಿ, ಕರ್ನಾಟಕದ ಸಮಸ್ಯೆಯತ್ತ ಇನ್ನೂ ಗಮನ ಹರಿಸುವ ಲಕ್ಷಣಗಳು ಸದ್ಯಕ್ಕೆ ಕಾಣುತ್ತಿಲ್ಲ.