ಸಿಬಿಐ ತನಿಖೆ- ಜಯ ಬಿಎಸ್ವೈಗೆ: ಆಚಾರ್ಯ ಅಭಯ
ಗಮನಾರ್ಹವೆಂದರೆ ಆಚಾರ್ಯ ಅವರು ಮೊದಲಿನಿಂದಲೂ ಯಡಿಯೂರಪ್ಪ ಅವರಿಗೆ ಕಾನೂನು ಸಲಹೆ ನೀಡುತ್ತಲೇ ಬಂದಿದ್ದಾರೆ. ತಾವು AG ಆಗಿದ್ದಾಗಲೇ ಪ್ರಕರಣವೊಂದರಲ್ಲಿ (ಭದ್ರಾ ಮೇಲ್ದಂಡೆ ಯೋಜನೆ) ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಲಹೆ ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಅವರು AG ಆಗುಳಿದಿಲ್ಲ. ಆದ್ದರಿಂದ ಮತ್ತಷ್ಟು ಮುತುವರ್ಜಿಯಿಂದ ಮಾಜಿ ಮುಖ್ಯಮಂತ್ರಿಯ ನೆರವಿಗೆ ಧಾವಿಸಿದ್ದಾರೆ. ಜತೆಗೆ ಸಿಬಿಐ ತನಿಖೆಯಿಂದ ಏನೂ ಸಾಧಿಸಲಾಗದು ಎಂದು ಅಭಯವನ್ನೂ ನೀಡಿದ್ದಾರೆ ಎಂದು ಆಪ್ತ ಮೂಲಗಳು ಹೇಳಿವೆ.
ಭಾನುವಾರದ ಭೇಟಿ ವೇಳೆ ಯಡಿಯೂರಪ್ಪ ಮತ್ತು ಅವರ ಇಬ್ಬರು ಪುತ್ರರಾದ ವಿಜಯೇಂದ್ರ ಮತ್ತು ರಾಘವೇಂದ್ರ ಅವರನ್ನು ಕೂಡಿಸಿಕೊಂಡು ಸಿಬಿಐ ತನಿಖೆಯನ್ನು ಹೇಗೆ ಎದುರಿಸಬೇಕು ಮತ್ತು ಪ್ರಕರಣದಿಂದ ಹೇಗೆ ಹೊರಬರಬೇಕು ಎಂಬುದರ ಬಗ್ಗೆ ಹಲವಾರು ಕಾನೂನು Tips ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕ ಹೈಕೋರ್ಟ್ ಈಗಾಗಲೆ ಪ್ರಕರಣದಲ್ಲಿ FIR ದಾಖಲಿಸಿರುವುದಕ್ಕೆ ತಡೆಯಾಜ್ಞೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ಈಗ ಎಚ್ಚರಿಕೆಯ ಕ್ರಮ ಅನುಸರಿಸ ಬೇಕಾಗಿದೆ. ಈ ವಿದ್ಯಮಾನವು ನಿಮ್ಮ ಪರವಾಗಿ ಕೆಲಸ ಮಾಡಲಿದೆ. ಅಷ್ಟರ ಮಟ್ಟಿಗೆ ನೀವು safe ಎಂದಿದ್ದಾರೆ ಆಚಾರ್ಯರು.
ಸಿಬಿಐ ನಾಳೆ, ನಾಳಿದ್ದೋ ತಮ್ಮನ್ನು ಬಂಧಿಸಿದರೆ ಗತಿಯೇನು ಎಂದು ಬಿಎಸ್ವೈ ಮಕ್ಕಳು ಆತಂಕ ವ್ಯಕ್ತಪಡಿಸಿದ್ದಾಗ ಅಂತಾದ್ದೇನೂ ಆಗುವುದಿಲ್ಲ. ಭಯ ಪಡಬೇಡಿ ಎಂದು ಅಚಾರ್ಯರು ತಮ್ಮ ಶ್ರೀರಕ್ಷೆ ನೀಡಿದ್ದಾರೆ.
ಈ ಮದ್ಯೆ, ಬೆಂಗಳೂರು ಸಿಬಿಐನ ಭ್ರಷ್ಟಾಚಾರ ವಿರೋಧಿ ಘಟಕದ (ACB) DIG ಆರ್. ಹಿತೇಂದ್ರ ಕುಮಾರ್ ಅವರು ಸೋಮವಾರ ನವದೆಹಲಿಗೆ ಪ್ರಯಾಣ ಬೆಳೆಸಿದ್ದು, ಮಂಗಳವಾರ ಸುಪ್ರೀಂಕೋರ್ಟಿನ order copy ಹಿಡಿದುಕೊಂಡು ಬರಲಿದ್ದಾರೆ. ಆ ನಂತರ ಬೆಂಗಳೂರಿನಲ್ಲಿರುವ ಸಿಬಿಐ ವಿಶೇಷ ಕೋರ್ಟಿನಲ್ಲಿ ಬುಧವಾರ FIR ದಾಖಲು, ಮುಂದಿನ ಪ್ರಕ್ರಿಯೆ.
ಆದರೆ DIG ಆರ್. ಹಿತೇಂದ್ರ ಕುಮಾರ್ ಅವರೇ ಪ್ರಕರಣದ ಮುಖ್ಯ ತನಿಖಾಧಿಕಾರಿ ಆಗುತ್ತಾರಾ ಎಂಬುದು ಇನ್ನೂ ಖಚಿತಪಟ್ಟಿಲ್ಲ. 1996ನೇ ಸಾಲಿನ ಕರ್ನಾಟಕ ಕೇಡರಿನ IPS ಅಧಿಕಾರಿ ಹಿತೇಂದ್ರ ಅವರು ಪ್ರಸ್ತುತ deputation ಮೇಲೆ ಸಿಬಿಐನಲ್ಲಿದ್ದು, 2013ರ ಅಕ್ಟೋಬರ್ 31ರವರೆಗೂ ಸಿಬಿಐನಲ್ಲಿರುತ್ತಾರೆ.