ನಿಗೂಢ ಸ್ಥಳದಲ್ಲಿ ಲಷ್ಕರ್ ಉಗ್ರರ ವಿಚಾರಣೆ
ಮುಹಮ್ಮದ್ ಖಫೀಲ್ ಅಖ್ತರ್ನನ್ನು 15ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡುವಂತೆ ರಾಂಚಿ ಕೋರ್ಟ್ ನ್ಯಾಯಾಧೀಶರು ಆದೇಶಿಸಿದ್ದರು. ಆರೋಪಿ ಅಖ್ತರ್ನನ್ನು ಕಳೆದ ರಾತ್ರಿ ನಗರಕ್ಕೆ ಕರೆತಂದು ಒಂದನೆ ಎಸಿಎಂಎಂ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿತ್ತು.
ನಂತರ ಅಖ್ತರ್ನನ್ನು ಸಿಸಿಬಿ ಪೊಲೀಸರು ನಿಗೂಢ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಜಾರ್ಖಂಡ್ ನ ರಾಂಚಿಯಲ್ಲಿ ಆರೋಪಿ ಇರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಜಾರ್ಖಂಡ್ಗೆ ತೆರಳಿದ ಕರ್ನಾಟಕ ಪೊಲೀಸರು ಖಫೀಲ್ನನ್ನು ಬಂಧಿಸಿದ್ದಾರೆ. ಬಳಿಕ ರಾಂಚಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಲ್ಲಿನ ಕೋರ್ಟ್ ಅನುಮಿ ಪಡೆದು ವಿಮಾನದ ಮೂಲಕ ಬೆಂಗಳೂರಿಗೆ ಕರೆತರಲಾಗಿದೆ.
ಉಗ್ರರನ್ನು ಬಂಧಿಸಿರುವ ಕರ್ನಾಟಕ ಪೊಲೀಸರ ವಿರುದ್ಧ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗರಂ ಆಗಿದ್ದರು. ಬಿಹಾರ್ ಪೊಲೀಸರಿಗೆ ಒಂದಿಷ್ಟು ಸುಳಿವು ನೀಡದೆ ರಾಜ್ಯದಲ್ಲಿ ನುಗ್ಗಿದ್ದಾರೆ ಎಂದು ನಿತೀಶ್ ಕುಮಾರ್ ಆರೋಪಿಸಿದ್ದರು.
ಆದರೆ, ನಿತೀಶ್ ಅವರಿಗೆ ಪ್ರತ್ಯುತ್ತರ ನೀಡಿದ್ದ ಕರ್ನಾಟಕ ರಾಜ್ಯ ಗೃಹ ಸಚಿವ ಆರ್ ಅಶೋಕ್, ದೇಶದಲ್ಲಿ ಕಾನೂನು ಎಲ್ಲೆಡೆ ಒಂದೇ ರೀತಿ ಆಗಿದೆ. ಅನುಮತಿ ಪಡೆಯದೆ ಅವರ ರಾಜ್ಯಕ್ಕೆ ನುಗ್ಗಿಲ್ಲ ಎಂದಿದ್ದರು.
ಪಾಕಿಸ್ತಾನಕ್ಕೆ ಹಾರುವ ಯತ್ನದಲ್ಲಿದ್ದ ಖಫೀಲ್ ನಿಗೆ ಯಾಸಿನ್ ಭಟ್ಕಳ ಸೇರಿದಂತೆ ರಾಜ್ಯದಲ್ಲಿ ಉಗ್ರರ ಸಂಪರ್ಕ ಹೊಂದಿರುವ ವ್ಯಕ್ತಿಗಳ ಜೊತೆ ಖಫೀಲ್ ನಿರಂತರ ಮಾತುಕತೆ ನಡೆಸಿದ್ದ ಎಂದು ತಿಳಿದು ಬಂದಿದೆ. ರಾಜ್ಯದ ಪ್ರಮುಖ ಪ್ರವಾಸಿ ತಾಣಗಳು, ವಿಮಾನ ನಿಲ್ದಾಣದ ಮೇಲೆ ಉಗ್ರರ ಕರಿನೆರಳು ಇದೆ ಎಂಬುದು ಸ್ಪಷ್ಟವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.