ಕರ್ನಾಟಕ ಪೊಲೀಸರ ಮೇಲೆ ಸಿಎಂ ನಿತೀಶ್ ಗರಂ
ಬಿಹಾರ್ ನ ದರಬಾಂಗ್ ಜಿಲ್ಲೆ ಬ್ರಹ ಸಮೇಲಿ ಗ್ರಾಮದ ಮಹಮದ್ ಖಫೀದ್ ನನ್ನು ಜಾರ್ಖಂಡ್ ನಲ್ಲಿ ಬಂಧಿಸಲಾಗಿದೆ. ಇಂಡಿಯನ್ ಮುಜಾಹೀದ್ದೀನ್ ಸಂಘಟನೆಗೆ ಸೇರಿದ ಖಫೀದ್ ಶಿಕ್ಷಕ ವೃತ್ತಿಯಲ್ಲಿದ್ದು ಮುಸ್ಲಿಂ ಯುವಕರಿಗೆ ಜಿಹಾದಿ ಬಗ್ಗೆ ಪ್ರಚೋದನೆ ಮಾಡುತ್ತಿದ್ದ ಎನ್ನಲಾಗಿದೆ. ಆದರೆ, ಈತನನ್ನು ಬಂಧಿಸುವಲ್ಲಿ ಕರ್ನಾಟಕ ಪೊಲೀಸರು ಶಿಷ್ಟಾಚಾರ ಮರೆತಿದ್ದಾರೆ. ಬಿಹಾರ್ ಪೊಲೀಸರಿಗೆ ಒಂದಿಷ್ಟು ಸುಳಿವು ನೀಡದೆ ರಾಜ್ಯದಲ್ಲಿ ನುಗ್ಗಿದ್ದಾರೆ ಎಂದು ನಿತೀಶ್ ಕುಮಾರ್ ಆರೋಪಿಸಿದ್ದಾರೆ.
ಜಂಟಿ ಪೊಲೀಸ್ ಆಯುಕ್ತ ಬಿ ದಯಾನಂದ್ ನೇತೃತ್ವದಲ್ಲಿ ಎಸಿಪಿ ಬಿಎಸ್ ನ್ಯಾಮಗೌಡ, ಇನ್ಸ್ ಪೆಕ್ಟರ್ ವೇಣುಗೋಪಾಲ್, ಕೆ ನಾಗರಾಜು ಅವರ ತಂಡ ಈ ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಿತ್ತು.
ನಿತೀಶ್ ಗುಡುಗು: ಕರ್ನಾಟಕ ಪೊಲೀಸರ ವರ್ತನೆ ಬಗ್ಗೆ ವರದಿಯನ್ನು ನಿರೀಕ್ಷಿಸುತ್ತಿದ್ದೇನೆ. ವರದಿ ಬಂದ ನಂತರ ಕೇಂದ್ರ ಗೃಹ ಸಚಿವಾಲಯಕ್ಕೆ ಈ ಬಗ್ಗೆ ವಿವರಣೆ ನೀಡಲಾಗುವುದು.NCTC ಸಭೆಯಲ್ಲೂ ಈ ವಿಷಯ ಪ್ರಸ್ತಾಪಿಸುತ್ತೇನೆ. ಈ ನೆಲದ ಕಾನೂನನ್ನು ಪಾಲಿಸುವುದು, ಗೌರವಿಸುವುದು ಪರರಾಜ್ಯ ಪೊಲೀಸರ ಮೊದಲ ಕರ್ತವ್ಯವಾಗಿದೆ ಎಂದು ನಿತೀಶ್ ಗುಡುಗಿದ್ದಾರೆ.
NCTC ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾದರೆ, ಗೃಹ ಸಚಿವ ಪಿ ಚಿದಂಬರಂಗೆ ಪ್ರಮುಕ ಅಸ್ತ್ರ ಸಿಕ್ಕಂತಾಗುತ್ತದೆ. NCTC ರೀತಿಯ ಕೇಂದ್ರೀಯ ಉಗ್ರ ನಿಗ್ರಹ ತಂಡ ಇದ್ದರೆ ಈ ರೀತಿ ಸಮಸ್ಯೆ ಬರುತ್ತಿರಲಿಲ್ಲ ಎಂದು ಚಿದು ವಾದಿಸುವ ಸಾಧ್ಯತೆಯಿದೆ.
ದರ್ಬಾಂಗ ಜಿಲ್ಲಾ ಎಸ್ಪಿ ಗರಿಮಾ ಮಲಿಕ್ ಪ್ರಕಾರ, ಕರ್ನಾಟಕ ಪೊಲೀಸರು ಹಿರಿಯ ಅಧಿಕಾರಿಗಳಾಗಲಿ, ಸ್ಥಳೀಯ ಪೊಲೀಸರಿಗಾಗಲಿ ವಿಷ್ಯ ತಿಳಿಸಿರಲಿಲ್ಲ. ಅಬ್ದುಲ್ ಸಲಾಂ ಅವರ ಮಗ ಅಖ್ತರ್ ನನ್ನು ಬಂಧಿಸಿದ ನಂತರ ನಮಗೆ ವಿಷಯ ತಿಳಿಸಲಾಯಿತು ಎಂದಿದ್ದಾರೆ.
ಪಾಕಿಸ್ತಾನಕ್ಕೆ ತೆರಳಲು ಸಿದ್ಧತೆ ನಡೆಸಿದ್ದ ಅಖ್ತರ್ ನನ್ನು ಬೆಂಗಳೂರಿಗೆ ಕರೆತರಲು ರಾಂಚಿ ಕೋರ್ಟ್ ನಲ್ಲಿ ಮನವಿ ಸಲ್ಲಿಸಲಾಗಿದೆ. ಹೆಚ್ಚಿನ ವಿಚಾರಣೆ ಅಗತ್ಯವಿರುವುದರಿಂದ ಆದಷ್ಟು ಬೇಗ ಬೆಂಗಳೂರಿಗೆ ಕರೆ ತರಲಾಗುವುದು ಎಂದು ಜಂಟಿ ಪೊಲೀಸ್ ಆಯುಕ್ತ ಬಿ ದಯಾನಂದ ಹೇಳಿದ್ದಾರೆ.