ಉಮೇಶ್ ರೆಡ್ಡಿ ಕ್ಷಮಾದಾನ ತಿರಸ್ಕರಿಸಿದ ಬಿಜೆಪಿ ಸಂಪುಟ
ಸುಮಾರು 15 ಹತ್ಯೆ ಮತ್ತು ಅತ್ಯಾಚಾರ ಪ್ರಕರಣಗಲ್ಲಿ ಭಾಗಿಯಾಗಿರುವ ಉಮೇಶ್ ರೆಡ್ಡಿಗೆ 2006ರಲ್ಲಿ ತ್ವರಿತಗತಿ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿತ್ತು. ಉಮೇಶ್ ರೆಡ್ಡಿಯ ಮೃಗೀಯ ವ್ಯಕ್ತಿತ್ವ, ನಿರ್ದಯವಾಗಿ ಹತ್ಯೆ ಮಾಡಿದ ರೀತಿಯನ್ನು ಪರಿಗಣಿಸಿ ರೆಡ್ಡಿ ಮರಣದಂಡನೆಗೆ ಅರ್ಹ ಎಂದು ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿತ್ತು.
ಉಮೇಶ್ ರೆಡ್ಡಿಯ ತಾಯಿ ಗೌರಮ್ಮ ಅವರು ಮಗನಿಗೆ ಕ್ಷಮೆ ನೀಡಬೇಕೆಂದು ರಾಷ್ಟ್ರಪತಿಗೆ ಮನವಿಪತ್ರ ಸಲ್ಲಿಸಿದ್ದಾರೆ. ಅದನ್ನು ಕರ್ನಾಟಕದ ರಾಜ್ಯಪಾಲರಿಗೂ ರವಾನಿಸಿದ್ದಾರೆ. ಈಗ ಪತ್ರ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕೈಯಲ್ಲಿದೆ. ಯಾವುದೇ ಕಾರಣಕ್ಕೂ ದಯೆ ನೀಡಬಾರದೆಂದು ಸದಾನಂದ ಗೌಡರ ಸಂಪುಟ ರಾಜ್ಯಪಾಲರಿಗೆ ಮನವಿ ಮಾಡಿದೆ.
ಒಟ್ಟು ನಾಲ್ಕು ಪ್ರಕರಣಗಳಲ್ಲಿ ರೆಡ್ಡಿ ಅಪರಾಧ ಸಾಬೀತಾಗಿದೆ. ಜಯಶ್ರೀ ಮರಡಿ ಸುಬ್ಬಯ್ಯ ಎಂಬ ವಿಧವೆಯನ್ನು 1998ರಲ್ಲಿ ಅತ್ಯಾಚಾರ ಮಾಡಿ, ನಿರ್ದಾಕ್ಷಿಣ್ಯವಾಗಿ ಹತ್ಯೆಗೈದ ಪ್ರಕರಣದಲ್ಲಿ 2006ರಲ್ಲಿ ತ್ವರಿತ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಅದನ್ನು 2007ರಲ್ಲಿ ಹೈಕೋರ್ಟ್ ಎತ್ತಿಹಿಡಿದಿತ್ತು.
ಚಿತ್ರದುರ್ಗದ ಉಮೇಶ್ ರೆಡ್ಡಿ ಬೆಂಗಳೂರಿನಲ್ಲಿ ಮಾತ್ರವಲ್ಲ, ಜಮ್ಮು ಕಾಶ್ಮೀರ, ಮೈಸೂರು, ಪುಣೆ, ಮುಂಬೈ, ಅಹ್ಮದಾಬಾದ್, ಬರೋಡಾ, ಹುಬ್ಬಳ್ಳಿ ಮುಂತಾದ ಕಡೆಗಳಲ್ಲಿ ಅಮಾನವೀಯ ಕೃತ್ಯ ಎಸಗಿದ್ದಾನೆ. ಮಹಿಳೆಯರ ಒಳಉಡುಪುಗಳನ್ನು ಕದ್ದು ಸಂಗ್ರಹಿಸುತ್ತಿದ್ದ. ಭಾರತೀಯ ಸಂವಿಧಾನದ 161 ಅನುಚ್ಛೇದದ ಪ್ರಕಾರ ರಾಜ್ಯಪಾಲರು ಮತ್ತು ಸಂವಿಧಾನದ 72ನೇ ಅನುಚ್ಛೇದದ ಪ್ರಕಾರ ರಾಷ್ಟ್ರಪತಿಗಳು ಕ್ಷಮಾದಾನ ಮಾಡುವ ಹಕ್ಕು ಹೊಂದಿದ್ದಾರೆ.