ಭಯೋತ್ಪಾದನೆ ನಿಗ್ರಹ ಕೇಂದ್ರ : ಪಿಎಂ ಸಮರ್ಥನೆ
ಎನ್ಸಿಟಿಸಿ ಸ್ಥಾಪನೆಗೆ ಕಾಂಗ್ರೆಸ್ಸೇತರ ರಾಜ್ಯಗಳಿಂದ ತೀವ್ರ ವಿರೋಧ ಬಂದಿದ್ದ ಕಾರಣ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಶನಿವಾರ ರಾಷ್ಟ್ರದ ರಾಜಧಾನಿಯಲ್ಲಿ ಕರೆಯಲಾಗಿತ್ತು. ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಕೇಂದ್ರದ ಸ್ಥಾಪನೆಯಿಂದ ರಾಜ್ಯಗಳಿಗೆ ಇನ್ನಷ್ಟು ಹೆಚ್ಚಿನ ಶಕ್ತಿ ದೊರೆಯುತ್ತದೆ ಎಂದು ನುಡಿದರು.
ಇದು ರಾಜ್ಯ ಮತ್ತು ಕೇಂದ್ರದ ನಡುವಿನ ಯುದ್ಧವಲ್ಲ. ಭಯೋತ್ಪಾದನೆಯನ್ನು ಹತ್ತಿಕ್ಕಲು ಆಯಾ ರಾಜ್ಯಗಳೊಂದಿಗೆ ಸಮಾಲೋಚಿಸಿ, ರಾಜ್ಯಗಳ ಸಹಯೋಗದಿಂದ ಕಾರ್ಯತಂತ್ರ ರೂಪಿಸಲಾಗುವುದು. ಭಯೋತ್ಪಾದನೆ ದೇಶದ ಭದ್ರತೆಗೇ ಧಕ್ಕೆ ತರುತ್ತಿದೆ. ಇದನ್ನು ಹತ್ತಿಕ್ಕುವ ಕಾರ್ಯ ರಾಜ್ಯಗಳಿಂದ ಅಥವಾ ಕೇಂದ್ರದಿಂದ ಏಕಾಂಗಿಯಾಗಿ ಸಾಧಿಸಲು ಸಾಧ್ಯವಿಲ್ಲ ಎಂದು ಅವರು ಎನ್ಸಿಟಿಸಿ ವಿರೋಧಿಸುತ್ತಿರುವ ಮುಖ್ಯಮಂತ್ರಿಗಳನ್ನು ಮನವೊಲಿಸಲು ಯತ್ನಿಸಿದರು.
ಭಯೋತ್ಪಾದನಾ ನಿಗ್ರಹ ಕೇಂದ್ರದ ಸ್ಥಾಪನೆಗೆ ಕರ್ನಾಟಕದ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಭಾರೀ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕೂಡ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯದ ಅಧಿಕಾರವನ್ನು ಕಸಿಯಲು ಕೇಂದ್ರಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಎನ್ಸಿಟಿಸಿ ಸ್ಥಾಪನೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ವಿರೋಧಿಸಿದ್ದಾರೆ. [ಕರ್ನಾಟಕ ಏಕೆ ವಿರೋಧಿಸುತ್ತಿದೆ]