ಚಿತ್ರದುರ್ಗದ ಹಸುಗಳಿಗೆ ಉಡುಪಿ ಮೇವು: ಪೇಜಾವರ ಶ್ರೀ
ಬರಪೀಡಿತ ಚಿತ್ರದುರ್ಗ ಜಿಲ್ಲೆ, ಪಾವಗಡ ಸೇರಿದಂತೆ ಹಲವು ಕಡೆ ಜಾನುವಾರುಗಳಿಗೆ ಮೇವು ಸರಬರಾಜು ಮಾಡುವ ವ್ಯವಸ್ಥೆಯನ್ನು ಮಠದ ವತಿಯಿಂದ ಕಲ್ಪಿಸಲಾಗಿದೆ. ಸ್ಥಳೀಯರು ಕೂಡಾ ಇದರಲ್ಲಿ ಕೈ ಜೋಡಿಸಿ ಜಾನುವಾರುಗಳನ್ನು ಉಳಿಸುವ ಕಾರ್ಯದಲ್ಲಿ ತೊಡಗಬೇಕು ಎಂದು ಪೇಜಾವರ ಶ್ರೀಗಳು ಹೇಳಿದರು.
ಮಡೆಸ್ನಾನ ನಿಷೇಧ: ಬ್ರಾಹ್ಮಣರು ಉಂಡ ಎಲೆಯಲ್ಲಿ ಮಡೆಸ್ನಾನ ಮಾಡುವ ಪದ್ಧತಿಯಿಂದ ಇರುವುದರಿಂದ ಬ್ರಾಹ್ಮಣರಿಗೆ ಕೆಟ್ಟ ಹೆಸರು ಬರುತ್ತಿದೆ. ಸ್ವಇಚ್ಛೆಯಿಂದ ಬ್ರಾಹ್ಮಣರು ಮಡೆಸ್ನಾನವನ್ನು ಬಹಿಷ್ಕರಿಸಬೇಕು.
ಮಡೆಸ್ನಾನ ಆಚರಣೆ ಮೊದಲು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿಷೇಧವಾದರೆ ಉಳಿದೆಡೆಗಳಲ್ಲೂ ನಿಲ್ಲುತ್ತದೆ. ಉಡುಪಿ ಮಠದ ಅಧೀನದಲ್ಲಿರುವ ಮುಚ್ಲುಗೋಡು ಮುಂತಾದ ದೇಗುಲಗಳಲ್ಲಿ ಮಡೆಸ್ನಾನ ನಿಲ್ಲಿಸಲು ಪರ್ಯಾಯ ಮಠಾಧೀಶರಿಗೆ ಕೇಳಿಕೊಳ್ಳಲಾಗಿದೆ.
ಮಡೆಸ್ನಾನ ನಿಷೇಧಿಸಿದರೆ ಹಿಂದೂ ಧರ್ಮಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಪೂಜೆ, ಉತ್ಸವ, ಬ್ರಹ್ಮಕಲಶದಂತೆ ಇದು ಕಡ್ಡಾಯವಾದ ಆಚರಣೆಯಲ್ಲ. ಎಲ್ಲರನ್ನೂ ಒಗ್ಗೂಡಿಸಿ ಸನ್ಮಾರ್ಗದಲ್ಲಿ ಕರೆದೊಯ್ಯುವ ಕಾರ್ಯವನ್ನು ಧರ್ಮ ಮಾಡುತ್ತದೆ, ಧರ್ಮ ಎಂದಿಗೂ ಯಾರನ್ನೂ ಬೇರ್ಪಡಿಸುವುದಿಲ್ಲ ಎಂದು ವಿಶ್ವೇಶತೀರ್ಥರು ತಿಳಿ ಹೇಳಿದರು.