ಲೋಕಪಾಲ್ ಜಾರಿಯಾದರೆ ಜೈಲುಗಳು ಭರ್ತಿ: ಕಲಾಂ
ಹೌದು, ನಮ್ಮ ರಾಜಕೀಯ ಪಕ್ಷಗಳು ಯಾವ hidden agenda ವನ್ನಿಟ್ಟುಕೊಂಡು ಈ ಕಲಾಂ ಸಾಹೇಬರನ್ನು ಮತ್ತೆ ರಾಷ್ಟ್ರಪತಿ ಗಾದಿಯಲ್ಲಿ ಕುಳ್ಳರಿಸಲು ಯತ್ನಿಸುತ್ತಿವೆಯೋ ಆದರೆ ಅವರು ಮಾತ್ರ - ನೋಡಿ ಈ ಜನ ಲೋಕಪಾಲ ಮಸೂದೆ ಅಂತ ಒಂದು ಇದೆಯಲ್ಲ, ಅದನ್ನೇನಾದ್ರೂ ಜಾರಿಗೆ ತಂದುಬಿಟ್ರೆ ಮುಗಿದ್ಹೋಯ್ತು ಈ ರಾಜಕಾರಣಿಗಳ ಕಥೆ. ನಮ್ಮ ದೇಶದ ಎಲ್ಲ ಜೈಲುಗಳೂ ಈ ಭ್ರಷ್ಟ ಮಂದಿಯಿಂದ ತುಂಬಿತುಳುಕಲಿವೆ - ಎಂದು ರಾಂಚಿಯಲ್ಲಿ ಚಿಕ್ಕಮಕ್ಕಳೊಂದಿಗೆ ಚಕ್ಕಮಕ್ಕಳ ಹಾಕಿಕೊಂಡು ಕಲಾಂ ತಾತಾ ಹೇಳಿದ್ದಾರೆ.
ಆದರೆ, 'ನಮಗದು ಬೇಡ. ಜೈಲುಗಳಿಗೆ ಹೋಗುವಂತಹ ತಪ್ಪನ್ನು ಯಾರೂ ಮಾಡುವುದು ಬೇಡ. ಅಂದರೆ ಲಂಚಕ್ಕೆ ಕೈಚಾಚುವುದು ಬೇಡ. ಭ್ರಷ್ಟಾಚಾರಕ್ಕೆ ಮಣೆ ಹಾಕುವುದು ಬೇಡ' ಎಂದು ಕಲಾಂ ಮಕ್ಕಳ ತಿಳಿ ಮನಸ್ಸುಗಳಿಗೆ ತಿಳಿಯ ಹೇಳಿದ್ದಾರೆ.
'ಆದ್ದರಿಂದ ಮಕ್ಕಳು ಮತ್ತು ಯುವಜನತೆ ಭ್ರಷ್ಟಾಚಾರವನ್ನು ನಿರ್ನಾಮ ಮಾಡುವುದಕ್ಕೆ ಸಂಕಲ್ಪ ತೊಡಬೇಕು. ನಮ್ಮ ಮನೆ-ಮನಗಳಲ್ಲಿ ಭ್ರಷ್ಟಾಚಾರ ಇಣುಕಬಾರದು. ದೊಡ್ಡವರು ಲಂಚ ಮುಟ್ಟುವುದು ನಿಮ್ಮ ಕಣ್ಣಿಗೆ ಬಿದ್ದರೆ ಹಾಗಲ್ಲ ಹೀಗೆ ಅಂತ ಹೇಳುತ್ತಾ ನಯವಾಗಿ ಅಂತಹ ಭ್ರಷ್ಟರನ್ನು ಸರಿ ದಾರಿಗೆ ತನ್ನಿ' ಎಂದೂ ಕಲಾಂ ಕಿವಿಮಾತು ಹೇಳಿದ್ದಾರೆ.