ಕರ್ನಾಟಕದಲ್ಲಿ ಗಣಿಗಾರಿಕೆ ಮಾಡಿಲ್ಲ: ಅದಾನಿ
ಕರ್ನಾಟಕದ ಬೇಲೇಕೇರಿ ಬಂದರಿನಲ್ಲಿ ಮುಟ್ಟುಗೋಲು ಹಾಕಿದ್ದ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅದಾನಿ ಕಂಪನಿಯನ್ನು ಆರೋಪಿಯನ್ನಾಗಿಸಿ ಸಿಇಸಿ ಸುಪ್ರೀಂಕೋರ್ಟೀಗೆ ವರದಿ ಸಲ್ಲಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅದಾನಿ ಕಂಪನಿಯ ವಕ್ತಾರರು ಆರೋಪವನ್ನು ಅಲ್ಲಗೆಳೆದಿದ್ದಾರೆ.
ಜ.21ರಂದು ಧಾರವಾಡ ಮೂಲದ ಎನ್ಜಿಒ ಸಮಾಜ ಪರಿವರ್ತನಾ ಸಂಸ್ಥೆ ಸಲ್ಲಿಸಿದ ಅರ್ಜಿಯ ಮೇರೆಗೆ ಕರ್ನಾಟಕದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ತನಿಖೆಗೆ ಸುಪ್ರೀಂ ಕೋರ್ಟು ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ) ರಚಿಸಿತ್ತು. ಈ ಸಮಿತಿ ತನ್ನ ವರದಿಯಲ್ಲಿ ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ. ಈ ಶಿಫಾರಸಿನಲ್ಲಿ ಅದಾನಿ ಎಂಟರ್ಪ್ರೈಸೆಸ್ ಸಹಿತ ಅಕ್ರಮವಾಗಿ ಅದಿರು ಸಾಗಾಟ ಮಾಡಿರುವ ಒಟ್ಟು ನಾಲ್ಕು ಕಂಪೆನಿಗಳ ಮೇಲೆ ತನಿಖೆಗೆ ಸೂಚಿಸಲಾಗಿದೆ.
"ಕರ್ನಾಟಕ ಅಥವಾ ದೇಶದ ಇತರ ಭಾಗಗಳಿಂದ ಕಬ್ಬಿಣದ ಅದಿರು ಸಾಗಿಸುವಂತಹ ಸ್ವಂತದ ಅಥವಾ ಖಾಸಗಿ ಸಂಚಾಲನೆಯ ಕಂಪೆನಿ ಹೊಂದಿಲ್ಲ ಮತ್ತು ಅದಿರು ರಫ್ತು ಮಾಡಿಲ್ಲ. ಅದಿರು ರಫ್ತು, ಸಾಗಾಟ, ಬಂದರು ಬಳಕೆ ಲೈಸನ್ ಬಗೆಗಿನ ಜವಾಬ್ದಾರಿ ಅದಿರು ಕಂಪನಿ ಮಾಲೀಕರಿಗೆ ಸೇರುತ್ತದೆ. ನಮಗೂ ಅದಕ್ಕೂ ಸಂಬಂಧವಿಲ್ಲ" ಎಂದು ಕಂಪನಿ ವಕ್ತಾರರು ಹೇಳಿದ್ದಾರೆ.
ಬೇಲೆಕೇರಿ ಮತ್ತು ಕಾರವಾರ ಬಂದರಿನಲ್ಲಿ ಅದಾನಿ ಎಂಟರ್ಪ್ರೈಸೆಸ್ ಅಲ್ಲದೆ ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್, ಸಾಲ್ಗಾಂವ್ಕರ್ ಮೈನಿಂಗ್ ಇಂಡಸ್ಟ್ರೀಸ್ ಮತ್ತು ರಾಜ್ ಮಹಾಲ್ ಸಿಲ್ಕ್ಸ್ ಕಬ್ಬಿಣದ ಅದಿರು ರಪ್ತು ಮಾಡಿದೆ ಎಂದು ಸಿಇಸಿ ವರದಿಯಲ್ಲಿ ಹೇಳಲಾಗಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅದಾನಿ ಸಂಸ್ಥೆಗೆ ಸಹಾಯ ಮಾಡಿರುವ ಬಗ್ಗೆ ಪ್ರಸ್ತಾಪಿಸಲಾಗಿದ್ದರೂ ಎಲ್ಲೂ ಗಾಲಿ ಜನಾರ್ದನ ರೆಡ್ಡಿ ಅವರ ಹೆಸರು ಸೇರಿಸಿಲ್ಲ. ವಿಶೇಷ ಎಂದರೆ, ಬೇಲೇಕೇರಿ ಬಂದರು ಅಕ್ರಮದ ಬಗ್ಗೆ ವರದಿ ನೀಡಿದ್ದ ನಿಕಟ ಪೂರ್ವ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಜನಾರ್ದನ ರೆಡ್ಡಿ ಸಂಸ್ಥೆ ಅಕ್ರಮಗಳನ್ನು ಪ್ರಮುಖ ಆರೋಪ ಸ್ಥಾನದಲ್ಲಿ ನಿಲ್ಲಿಸಿದ್ದರು.
ಒಟ್ಟು 850,000 ಮಟ್ರಿಕ್ ಟನ್ ನಷ್ಟು ಕಬ್ಬಿಣ ಅದಿರು ಅಕ್ರಮವಾಗಿ ರಫ್ತಾಗಿದೆ ಎಂಬ ಆರೋಪವನ್ನು ಈ ನಾಲ್ಕು ಕಂಪನಿಗಳ ಮೇಲೆ ಹೊರೆಸಲಾಗಿದೆ.