ಫೋನ್ ಮೂಲಕ ವಿದೇಶಿ ಮದ್ಯ ಕೇಳಿದ ರೇಣುಕಾ
ಸರ್ಕಾರಿ ಕಚೇರಿಯಲ್ಲಿ ವಿದೇಶಿ ಮದ್ಯವನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಪ್ರಕರಣದಲ್ಲಿ ಯಾವುದೇ ಸಾಕ್ಷ್ಯ ಇಲ್ಲವೆಂದು ಕೋರ್ಟಿಗೆ ತಿಳಿಸಿ, ರೇಣುಕಾಚಾರ್ಯಗೆ ಲೋಕಾಯುಕ್ತ ಪೊಲೀಸರು ಕ್ಲೀನ್ ಚಿಟ್ ನೀಡಿದ್ದರು. ಆದರೆ ಇದರ ಬಗ್ಗೆ ಆಕ್ಷೇಪಣೆ ಸಲ್ಲಿಸುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾ ಎನ್ ಕೆ ಸುಧೀಂದ್ರ ರಾವ್ ಅವರು ಅಬಕಾರಿ ಇಲಾಖೆಯ ಉಪ ಆಯುಕ್ತ, ದೂರುದಾರ ಮೋಹನ್ ಕುಮಾರ್ ಅವರಿಗೆ ಸೂಚಿಸಿ, ಪ್ರಕರಣಕ್ಕೆ ಮರು ಜೀವ ನೀಡಿದ್ದರು.
ಇದೀಗ, ದೂರುದಾರ ಮೋಹನ್ ಕುಮಾರ್ ಕೋರ್ಟಿಗೆ ಹೊಸ ಸಾಕ್ಷ್ಯ ಮಂಡಿಸಿದ್ದಾರೆ. ಮಾರ್ಚ್ 19ರಿಂದ 21ರವರೆಗೆ ಅಬಕಾರಿ ಇಲಾಖೆಯ ಎಲ್ಲ ದೂರವಾಣಿ ಕರೆಗಳನ್ನೂ ಪರಿಶೀಲಿಸಿ. ಯಾವ ಕರೆ ಎಲ್ಲಿಂದ, ಎಷ್ಟು ಅವಧಿ ಕಾಲ ಮಾತನಾಡಲಾಗಿದೆ ಎಂಬುದನ್ನು ಪರಿಶೀಲಿಸಿ ಎಂದು ಅವರು ಅಲವತ್ತುಕೊಂಡಿದ್ದಾರೆ.
ತಮ್ಮ ಕಚೇರಿಯಿಂದ 25 ಸಾವಿರ ರು. ನಗದು ಮತ್ತು 20 ಬಾಟಲಿ ವಿದೇಶಿ ಮದ್ಯ ಸರಬರಾಜು ಮಾಡುವಂತೆ ಸಚಿವರು ಕರೆ ಮಾಡಿ ಆಗ್ರಹಿಸಿರುವುದು ಇದರಿಂದ ಸಾಬೀತಾಗುತ್ತದೆ ಎಂಬುದು ಬೆಂಗಳೂರು ಅಬಕಾರಿ ಇಲಾಖೆಯ ಉಪ ಆಯುಕ್ತರ ಹೊಸ ವಾದ ಮಂಡನೆ.
ಆದರೆ ಬಜೆಟ್ ಮಂಡನೆ ಸಂಬಂಧ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲು ಈ ಫೋನ್ ಫೋನ್ ಕರೆಗಳನ್ನು ಮಾಡಿದ್ದಾಗಿ ರೇಣುಕಾಚಾರ್ಯ ಅವರು ಲೋಕಾಯುಕ್ತ ಪೊಲೀಸರಿಗೆ ತಿಳಿಸಿದ್ದರು.
ಇದಕ್ಕೆ ಉತ್ತರಿಸಿರುವ ಇಲಾಖೆಯ ಉಪ ಆಯುಕ್ತರ ಮೋಹನ್ ಕುಮಾರ್, 'ಸಚಿವರು ಇಲಾಖೆಯ ಆಯುಕ್ತರು ಮತ್ತು ಜಂಟಿ ಆಯುಕ್ತರ ಜತೆ ಚರ್ಚಿಸುತ್ತಾರೆ. ಉಪ ಆಯುಕ್ತರ ಜತೆಯಂತೂ ಅವರು ಚರ್ಚಿಸುವ ಸಾಧ್ಯತೆಯಿಲ್ಲ' ಎಂದು ಗಮನ ಸೆಳೆದಿದ್ದಾರೆ. ಇನ್ನು ಲೋಕಾಯುಕ್ತ ಪೊಲೀಸರು ಕ್ಷಿಪ್ರಗತಿಯಲ್ಲಿ ಸಚಿವರ ವಿಚಾರಣೆ ನಡೆಸಿ, ಕೈತೊಳೆದುಕೊಂಡಿದ್ದಾರೆ. ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದೂ ತಿಳಿಸಿದರು.
ಜತೆಗೆ, ಜೆಸಿ ನಗರದಲ್ಲಿರುವ ಅಬಕಾರಿ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿ ನನ್ನನ್ನು ಬಂಧಿಸುವಾಗ ಇತರೆ ಉಪ ಆಯುಕ್ತರುಗಳೂ, ಇನ್ಸ್ಪೆಕ್ಟರುಗಳೂ ಇದ್ದರು. ಅವರನ್ನೂ ವಶಕ್ಕೆ ತೆಗೆದುಕೊಳ್ಳದೆ ಕೇವಲ ನನ್ನೊಬ್ಬನನ್ನೇ ಬಂಧಿಸಿರುವುದರ ಉದ್ದೇಶವಾದರೂ ಏನು ಎಂದು ಮೋಹನ್ ಕುಮಾರ್ ಕೋರ್ಟಿನಲ್ಲಿ ಪ್ರಶ್ನಿಸಿದ್ದಾರೆ.