ಶಾಸಕ ಸುರೇಶ್ ಗೌಡ ಕಾರು ಬಡಿದು ವೃದ್ಧ ಸಾವು
ಘಟನೆ ನಡೆದಾಗ ಗಾಯಗೊಂಡ ವ್ಯಕ್ತಿಯತ್ತ ತಿರುಗಿ ನೋಡದೆ ಶಾಸಕ ಸುರೇಶ್ ಅವರು ಮತ್ತೊಂದು ಕಾರು ಹತ್ತಿ ಹೊರಟು ಹೋದರು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. 'ಅಪಘಾತ ತಪ್ಪಿಸಲು ಸಾಧ್ಯವಿಲ್ಲ. ನನ್ನದೇನೂ ತಪ್ಪಿಲ್ಲ' ಎಂದು ಶಾಸಕ ಸುರೇಶ್ ಗೌಡರು ಹೇಳಿದ್ದರು.
ತಿಮ್ಮ ಹನುಮಯ್ಯ ಅವರು ಭಾನುವಾರ(ಏ.29) ಬೆಳಗ್ಗೆ 11 ಗಂಟೆ ಸುಮಾರಿಗೆ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಶಾಸಕ ಸುರೇಶ್ ಇದ್ದ ಕಾರು ಬಡಿದಿದೆ. ಈ ಅಪಘಾತದಿಂದ ತಿಮ್ಮ ಹನುಮಯ್ಯ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ಕಾಲು ಜಖಂಗೊಂಡಿದೆ. ಘಟನೆ ನಡೆದ ಬಳಿಕ ಶಾಸಕ ಸುರೇಶ್ ಗೌಡ ಅವರು ಸೌಜನ್ಯಕ್ಕೂ ಗಾಯಾಳು ಯೋಗಕ್ಷೇಮ ವಿಚಾರಿಸಿದೆ ತೆರಳಿದರು. ನಂತರ ಹತ್ತಿರದ ಹರ್ಷ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
'Accident is Accident ಆದರೆ, ನಾನು ಜನಪ್ರತಿನಿಧಿಯಾಗಿ ಏನು ಮಾಡಬೇಕೋ ಅದನ್ನು ಮಾಡಿದ್ದೇನೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ನಾನು ನಿರ್ಲಕ್ಷ್ಯ ಮಾಡಿಲ್ಲ. ಗಾಯಗೊಂಡವರ ಜೊತೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ' ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್ ಗೌಡ ಪ್ರತಿಕ್ರಿಯಿಸಿದ್ದಾರೆ.
'ನಮ್ಮ ಇಬ್ಬರು ಸ್ನೇಹಿತರು ನನ್ನ ಪರವಾಗಿ ಗಾಯಗೊಂಡ ವ್ಯಕ್ತಿ ಕ್ಷೇಮ ವಿಚಾರಿಸುತ್ತಿದ್ದಾರೆ. ಹರ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ನಂತರ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಅಥವಾ ನಿಮ್ಹಾನ್ಸ್ ಗೆ ಸೇರುವ ಬಗ್ಗೆ ಹನುಮಯ್ಯ ಅವರ ಮಕ್ಕಳಿಬ್ಬರು, ಇಬ್ಬರು ಡಾಕ್ಟರ್ ಸಮಾಲೋಚನೆ ನಡೆಸಿದ್ದಾರೆ. ನಾನು ನನ್ನ ಕರ್ತವ್ಯವನ್ನು ನಿರ್ವಹಿಸಿದ್ದೇನೆ' ಗಾಯಗೊಂಡ ವ್ಯಕ್ತಿಯ ಚಿಕಿತ್ಸೆ ವೆಚ್ಚ ಭರಿಸುತ್ತೇನೆ. ಸಂಜೆ ಆಸ್ಪತ್ರೆಗೆ ಭೇಟಿ ನೀಡುತ್ತೇನೆ ಎಂದು ಶಾಸಕ ಸುರೇಶ್ ಅವರು ಸುವರ್ಣ ಸುದ್ದಿ ವಾಹಿನಿಗೆ ಪ್ರತಿಕ್ರಿಯಿಸಿದ್ದಾರೆ.