ಬಂಗಾರು ಲಕ್ಷ್ಮಣ್ಗೆ 4 ವರ್ಷ ಜೈಲು, 1 ಲಕ್ಷ ರು. ದಂಡ
ನಕಲಿ ಅಕ್ರಮ ಶಸ್ತ್ರಾಸ್ತ್ರ ಖರೀದಿ ವ್ಯವಹಾರದಲ್ಲಿ 1 ಲಕ್ಷ ರು. ಪಡೆಯುವಾಗ 2001ರಲ್ಲಿ ಬಂಗಾರು ಲಕ್ಷ್ಮಣ್ ಸಿಕ್ಕಿಬಿದ್ದಿದ್ದರು. ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ನಿಮಯ 9ರ ಅಡಿಯಲ್ಲಿ ಬಂಗಾರು ಲಕ್ಷ್ಣ್ಮಣ್ ಅವರ ಆರೋಪ ಸಾಬೀತಾಗಿದೆ. ಶಿಕ್ಷೆಯ ಪ್ರಮಾಣ ಪ್ರಕಟವಾಗುತ್ತಿದ್ದಂತೆ ದೆಹಲಿ ಪೊಲೀಸರು ಲಕ್ಷ್ಮಣ್ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡು, ತಿಹಾರ್ ಜೈಲಿಗೆ ತಳ್ಳಲಿದ್ದಾರೆ.
ಏನು ಮಾಡಿದರೂ ನಡೆಯುತ್ತದೆ ಎಂಬ ರಾಜಕಾರಣಿಗಳ 'ಚಲ್ತಾ ಹೈ' ಧೋರಣೆಗೆ ದೆಹಲಿ ಕೋರ್ಟ್ ಭಾರೀ ಹೊಡೆತ ಕೊಟ್ಟಿದೆ. ತನ್ನ ತೀರ್ಪಿನಲ್ಲಿ ಈ ಕುರಿತಂತೆ ಕಟುವಾದ ಮಾತುಗಳಲ್ಲಿ ಟೀಕಿಸಿದೆ. ಭಾರತದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಪ್ರಮಾಣ ಗಮನಿಸಿದರೆ ಬಂಗಾರು ಲಕ್ಷ್ಮಣ್ ಮಾಡಿರುವುದು ಘೋರ ಅಪರಾಧ ಎಂದು ಹೇಳಿದೆ. ರಾಜಕೀಯದಲ್ಲಿನ ಭ್ರಷ್ಟಾಚಾರವನ್ನು ತೊಳೆಯಲು ಈ ಪ್ರಕರಣ ನಾಂದಿಯಾಗಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಶಿಕ್ಷೆಯ ವಿರುದ್ಧ ದೆಹಲಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸುವುದಾಗಿ ಬಂಗಾರು ಲಕ್ಷ್ಮಣ್ ಅವರ ವಕೀಲ ಹೇಳಿದ್ದಾರೆ. ಆದರೆ, ಮೇಲ್ಮನವಿಯ ಪ್ರಕ್ರಿಯೆ ಸುದೀರ್ಘವಾಗಿರುವುದರಿಂದ ಕೆಲ ದಿನಗಳ ಕಾಲ ತಿಹಾರ್ ಜೈಲಿನಲ್ಲಿ ಬಂಗಾರು ಲಕ್ಷ್ಮಣ್ ಅವರು ಕಾಲ ಕಳೆಯುವುದು ಅನಿವಾರ್ಯವಾಗಿದೆ.
ತಾವು ಎರಡು ಬಾರಿ ಬೈಪಾಸ್ ಸರ್ಜರಿ ಮಾಡಿಸಿಕೊಂಡಿದ್ದರಿಂದ ಮತ್ತು ತಮಗೆ ವಯಸ್ಸಾಗಿರುವುದರಿಂದ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಬೇಕೆಂದು 72 ವರ್ಷದ ಬಂಗಾರು ಲಕ್ಷ್ಮಣ್ ನ್ಯಾಯಾಲಯವನ್ನು ಕೋರಿದ್ದರು. ಆದರೆ, ಸಿಬಿಐ ವಕೀಲರು 5 ವರ್ಷಗಳ ಗರಿಷ್ಠ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದರು. ಬಂಗಾರು ಅವರ ವಯಸ್ಸು ಮತ್ತು ಅನಾರೋಗ್ಯವನ್ನು ಗಣನೆಗೆ ತೆಗೆದುಕೊಳ್ಳದ ಕೋರ್ಟ್ ನಾಲ್ಕು ವರ್ಷಕ್ಕೆ ಶಿಕ್ಷೆಯನ್ನು ನಿಗದಿ ಮಾಡಿದೆ.