ರಾಜ್ಯಸಭೆ ನಿವೃತ್ತರಿಗೆ, ಸಚಿನ್ಗಲ್ಲ : ಹೇಮಾ ಮಾಲಿನಿ
ಕರ್ನಾಟಕದಿಂದ ಕಳೆದ ಅವಧಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದ 63 ವರ್ಷದ ಚಿರಯವತಿ 'ಡ್ರೀಮ್ ಗರ್ಲ್' ಹೇಮಾ ಮಾಲಿನಿ ಅವರು, "ರಾಜ್ಯಸಭೆ ಇರುವುದು ನಿವೃತ್ತರಿಗೆ ಮಾತ್ರ. ಸಚಿನ್ ಇನ್ನೂ ನಿವೃತ್ತಿಯಾಗಿಲ್ಲ ಎಂದು ಅಂದುಕೊಂಡಿದ್ದೇನೆ. ಹಾಗೆಯೆ, ರಾಜ್ಯಸಭೆಯಲ್ಲಿ ಅವರಿಗೆ ಬೋರು ಹೊಡೆಯಲಿಕ್ಕಿಲ್ಲ" ಎಂದು ವ್ಯಂಗ್ಯಭರಿತ ಮಾತಿನಲ್ಲಿ ವಸ್ತುಸ್ಥಿತಿಯನ್ನು ಸಚಿನ್ ಮುಂದೆ ತೆರೆದಿಟ್ಟಿದ್ದಾರೆ.
ಸಚಿನ್ ನಾಮನಿರ್ದೇಶನವನ್ನು ಬಾಲಿವುಡ್ (ಮಾಜಿ) ನಿರ್ದೇಶಕ ಮಹೇಶ್ ಭಟ್ ಅವರು ಸ್ವಾಗತಿಸಿದ್ದಾರೆ. "ಸಚಿನ್ ಒಬ್ಬ ಮಹಾನ್ ವ್ಯಕ್ತಿ. ಅವರು ಮಹಾನ್ ಆಗಿದ್ದಕ್ಕೇ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಯಶಸ್ಸು ಅವರನ್ನು ಅಲ್ಲಿಯೂ ಹಿಂಬಾಲಿಸುತ್ತದೆ ಎಂದು ಆಶಿಸುತ್ತೇನೆ" ಎಂದು ಅವರು ನುಡಿದಿದ್ದಾರೆ.
ಆದರೆ, ಸಚಿನ್ ಅವರ ಆಯ್ಕೆಯಿಂದ ತೀವ್ರ ಆಘಾತ ವ್ಯಕ್ತಪಡಿಸಿರುವ ಮಾಜಿ ಕ್ರಿಕೆಟ್ ಪಟು ಸಂಜಯ್ ಮಾಂಜ್ರೇಕರ್ ಅವರು, "ಸಚಿನ್ ಅವರನ್ನು ನಾಮನಿರ್ದೇಶನ ಮಾಡಿರುವ ಸುದ್ದಿ ಆಘಾತಕರ. ಆ ನಾಮನಿರ್ದೇಶನವನ್ನು ಸಚಿನ್ ಒಪ್ಪಿಕೊಂಡಿದ್ದು ಮತ್ತೂ ಆಘಾತಕರ. ಸಚಿನ್ ಕ್ರಿಕೆಟ್ ಅಂಕಣದಲ್ಲಿ ಸಾಧಿಸಬೇಕಾಗಿರುವುದು ಇನ್ನೂ ಸಾಕಷ್ಟಿದೆ" ಎಂದಿದ್ದಾರೆ.
ಸಚಿನ್ ಅವರ ಆಯ್ಕೆಯ ಬಗ್ಗೆ ಟ್ವಿಟ್ಟರ್ನಲ್ಲಿಯೂ ಭಾರೀ ಚರ್ಚೆ ನಡೆದಿದೆ. ಹೆಚ್ಚಿನವರು ಇದಕ್ಕೆ ವಿರೋಧವಾಗಿದ್ದಾರೆ. ಕ್ರಿಕೆಟ್ಗೆ ಸಚಿನ್ ಅವರ ಸೇವೆ ಇನ್ನೂ ಬೇಕಾಗಿದೆ. ಅವರು ರಾಜಕೀಯ ಪ್ರವೇಶಿಸುತ್ತಿರುವುದು ಊಹಿಸಲೂ ಅಸಾಧ್ಯವಾಗಿದೆ ಎಂದು ಹಲವರು ಹೇಳಿದ್ದರೆ, ಸಚಿನ್ರಂಧ ಸಜ್ಜನರು ರಾಜಕೀಯಕ್ಕೆ ಬರಬೇಕು ಎಂದು ಕೆಲವರು ಟ್ವೀಟಿಸಿದ್ದಾರೆ. ಒನ್ಇಂಡಿಯಾ ಕನ್ನಡದಲ್ಲಿ, ಸಚಿನ್ ಯಾವ ಪಕ್ಷ ಸೇರಬೇಕು ಎಂದು ಕೇಳಿದ ಪ್ರಶ್ನೆಗೆ ಯಾವುದೂ ಬೇಡ ಎಂದು ಬಹುಸಂಖಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಪಿಟಿಐ)