ಸಚಿನ್ ತೆಂಡೂಲ್ಕರ್ ರಾಜಕೀಯ ಸೇರಬೇಕೆ?
ಸಚಿನ್ ಅವರ ನಾಮನಿರ್ದೇಶನವನ್ನು ಪಕ್ಷಭೇದ ಮರೆತು ಎಲ್ಲ ಪಕ್ಷಗಳು ಮುಕ್ತಕಂಠದಿಂದ ಸ್ವಾಗತಿಸಿವೆ. ಇದರ ಲಾಭ ಸಂಪೂರ್ಣ ಪಡೆಯಲು ಹವಣಿಸುತ್ತಿರುವ ಕಾಂಗ್ರೆಸ್ ಮಾತ್ರ, ಮತ್ತೆ ಬೋಫೋರ್ಸ್ ಭೂತವನ್ನು ಎಬ್ಬಿಸುತ್ತಿರುವ ವಿರೋಧ ಪಕ್ಷಗಳ ಗಮನವನ್ನು ಬೇರೆಡೆ ಸೆಳೆಯಲು ಈ ತಂತ್ರಗಾರಿಕೆ ಹೂಡುತ್ತಿದೆ ಎಂದು ದೂರಲಾಗುತ್ತಿದೆ.
ಭ್ರಷ್ಟಾಚಾರ ನಿಗ್ರಹಕ್ಕೆ ಕುರಿತಂತೆ ನಡೆದ ಚರ್ಚೆಯ ಸಂದರ್ಭದಲ್ಲಿ, ಬೋಫೋರ್ಸ್ ಲಂಚ ಹಗರಣ ಮುಚ್ಚಿದ ಕಾಂಗ್ರೆಸ್ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಬದ್ಧತೆಯನ್ನು ಬಿಜೆಪಿ ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ. ಕ್ವಟ್ರೋಚ್ಚಿ ವಿರುದ್ಧ ಬಲವಾದ ಸಾಕ್ಷಿಗಳಿದ್ದರೂ ಕ್ಲೀನ್ ಚಿಟ್ ನೀಡಿದ್ದೇಕೆ ಎಂದು ಕೇಳಿದ್ದಾರೆ. ಈ ಹಗರಣವನ್ನು ಮುಚ್ಚಿಹಾಕಿದ ಸಿಬಿಐ ಅಧಿಕಾರಿಗಳ ವಿರುದ್ಧ ಕೂಡ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಸೋನಿಯಾ ಅವರ ಬೋಫೋರ್ಸ್ ಗುಡುಗು ಎದ್ದಿರುವ ಹಂತದಲ್ಲಿ ಸಚಿನ್ ತೆಂಡೂಲ್ಕರ್ ಅವರ ನಾಮನಿರ್ದೇಶನದ ಸಹಾಯಪಡೆದು, ವಿರೋಧ ಪಕ್ಷಗಳ ದಿಕ್ಕುತಪ್ಪಿಸಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸಚಿನ್ ರನ್ನು ಸೆಳೆಯಲು ಕಾಂಗ್ರೆಸ್ ಯತ್ನಿಸುತ್ತಿರುವ ಹಂತದಲ್ಲಿ, ದಾಳವನ್ನು ಉರುಳಿಸಿರುವ ಮುಲಾಯಂ ಸಿಂಗ್, ಯಾವ ಪಕ್ಷ ಸೇರಬೇಕೆಂಬ ನಿರ್ಧಾರವನ್ನು ಸಚಿನ್ ಅವರಿಗೇ ಬಿಡಬೇಕು ಎಂದಿದ್ದಾರೆ.
ಸಚಿನ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಮೊದಲು ಅವರಿಗೆ ದೇಶದ ಅತ್ಯಮತ್ತಮ ನಾಗರಿಕ ಗೌರವ 'ಭಾರತ ರತ್ನ' ನೀಡಬೇಕಾಗಿತ್ತು ಎಂಬ ಮಾತನ್ನು ಶಿವಸೇನೆ ಹೇಳಿದೆ. ಸಚಿನ್ ಅವರ ಆಯ್ಕೆಯಿಂದ ಯುವಜನತೆಗೆ ರಾಜಕೀಯ ಸೇರಲು ಪ್ರೋತ್ಸಾಹ ಸಿಗಲಿದೆ ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ. ರಾಜಕೀಯ ಲಾಭಕ್ಕಾಗಿ ತಮ್ಮ ಹೆಸರು ಬಳಸಲಾಗುತ್ತಿರುವುದಕ್ಕೆ ಸಚಿನ್ ತೆಂಡೂಲ್ಕರ್ ಏನು ಹೇಳುತ್ತಾರೆ? ಅಸಲಿಗೆ ಸಚಿನ್ ರಾಜಕೀಯ ಸೇರಬೇಕಾ?