ಬಿದರಿ ಕೇಸ್: ಮಾಧ್ಯಮಗಳಿಗೆ ಕೋರ್ಟ್ ನಿಂದನೆ ನೋಟಿಸ್
ರಾಜ್ಯ ಐಜಿ ಡಿಜಿಪಿಯಾಗಿ ಶಂಕರ ಬಿದರಿ ಅವರನ್ನು ನೇಮಕ ಮಾಡಿ ಹೊರಡಿಸಿದ್ದ ಆದೇಶವನ್ನು ರದ್ದು ಮಾಡಿ ಹೈಕೋರ್ಟ್ ತೀರ್ಪು ನೀಡಿತ್ತು. ಕೋರ್ಟ್ ತೀರ್ಪಿನ ಬಗ್ಗೆ ಅವಹೇಳನಕಾರಿ ಟೀಕೆ ಮಾಡಿರುವ ಆರೋಪದ ಮೇಲೆ 3 ಪತ್ರಿಕೆಗಳಿಗೆ ಹೈಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.
'ಟೈಮ್ಸ್ ಆಫ್ ಇಂಡಿಯಾ'ದ ವ್ಯವಸ್ಥಾಪಕ ನಿರ್ದೇಶಕ ವಿನೀತ್ ಜೈನ್, 'ಹಿಂದುಸ್ತಾನ್ ಟೈಮ್ಸ್ 'ನ ಅಧ್ಯಕ್ಷೆ ಶೋಭನಾ ಭಾರ್ತಿ, 'ಕನ್ನಡಪ್ರಭ' ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹಾಗೂ ವರದಿಗಾರ ಪ್ರತಾಪ ಸಿಂಹ ಅವರ ವಿರುದ್ಧ ನರೇಂದ್ರ ಡಿ.ವಿ. ಗೌಡ ಹಾಗೂ ಇತರರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಆರೋಪ ಹೊರೆಸಿ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.
'ಕನ್ನಡಪ್ರಭ' ಪತ್ರಿಕೆಯಲ್ಲಿ ತೀರ್ಪಿನ ವಿರುದ್ಧ ಅವಹೇಳನಕಾರಿ ಟೀಕೆ ಮಾಡಲಾಗಿದೆ. ಉಳಿದ ಎರಡು ಪತ್ರಿಕೆಗಳು ತಮ್ಮ ವೆಬ್ಸೈಟ್ನಲ್ಲಿ ತೀರ್ಪಿನ ವಿರುದ್ಧ ಹೇಳಿಕೆ ನೀಡಿ, ಸಾರ್ವಜನಿಕರಿಂದ ಪ್ರತಿಕ್ರಿಯೆಗೆ ಆಹ್ವಾನಿಸಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
'ಕೋರ್ಟ್ ತೀರ್ಪಿನ ಪ್ರತಿ ಸಿಗುವ ಮುನ್ನವೇ, ನ್ಯಾಯಾಂಗದ ಬಗ್ಗೆ ತಪ್ಪು ಕಲ್ಪನೆ ಮೂಡಿಸುವಂತಹ ಸುದ್ದಿ ಪ್ರಕಟವಾಗಿದೆ. ನ್ಯಾಯಾಂಗಕ್ಕಿಂತ ತಮಗೇ ಎಲ್ಲವೂ ಗೊತ್ತು, ತಾವು ಸಮಾಜ ಸುಧಾಕರು ಎಂಬಂತೆ ಕನ್ನಡಪ್ರಭ ಪತ್ರಿಕೆಯು ಮುಖಪುಟದಲ್ಲಿಯೇ ಸುದ್ದಿ ಪ್ರಕಟಿಸಿದೆ' ಎಂದು ಅರ್ಜಿದಾರರು ದೂರಿದ್ದಾರೆ.
'ನರಹಂತಕ ವೀರಪ್ಪನ್ ಕಾರ್ಯಾಚರಣೆ ವೇಳೆ ನಾನು ಗಡಾಫಿ ಅಥವಾ ಸದ್ದಾಂ ಹುಸೇನ್ನಂತೆ ಸರ್ವಾಧಿಕಾರ ಮೆರೆದಿಲ್ಲ' ಎಂದು ಹೈಕೋರ್ಟಿಗೆ ಶಂಕರ ಬಿದರಿ ಪ್ರಮಾಣ ಪತ್ರ ಸಲ್ಲಿಸಿದ್ದರು.
ವೀರಪ್ಪನ್ ಕಾರ್ಯಾಚರಣೆ ವೇಳೆ ಅಮಾಯಕ ಮಹಿಳೆಯರ ಮೇಲೆ ನಡೆದ ಅತ್ಯಾಚಾರ, ಅನಾಹುತಗಳನ್ನು ಮನಗಂಡ ನ್ಯಾಯಮೂರ್ತಿಗಳು, ತಮ್ಮ ತೀರ್ಪಿನಲ್ಲಿ 'ಇವೆಲ್ಲ ನಿಜವೇ ಆಗಿದ್ದರೆ ಬಿದರಿ ಅವರು ಗಡಾಫಿ, ಸದ್ದಾಂಗಿಂತ ಕಡೆ' ಎಂದಿದ್ದರು. ಆದರೆ ಪ್ರಮಾಣ ಪತ್ರದ ವಿಷಯ ಪ್ರಸ್ತಾಪಿಸದೆಯೇ ನ್ಯಾಯಮೂರ್ತಿಗಳೇ ಖುದ್ದಾಗಿ ಈ ರೀತಿ ಹೇಳಿದ್ದಾರೆ ಎಂಬಂತೆ ಅರ್ಥ ಕಲ್ಪಿಸಿ ಪತ್ರಿಕೆಗಳು ಸುದ್ದಿ ಪ್ರಕಟಿಸಿರುವುದು ಸರಿಯಲ್ಲ ಎಂದು ಆರೋಪಿಸಲಾಗಿದೆ.