ಇನ್ಫೋಸಿಸ್ ಟೆಕ್ಕಿ ಪುತ್ರನ ಅಪಹರಣ ಸುಖಾಂತ್ಯ
ಹೈದರಾಬಾದಿನ ಇನ್ಫೋಸಿಸ್ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ಶಶಿಧರ್ ಎಂಬುವರ ಪುತ್ರ 1 ನೇ ತರಗತಿಯ ವಿದ್ಯಾರ್ಥಿ ವಿರುಪ್ಪಂನನ್ನು ನಗರದ ನಲ್ಲಗಂಡ್ಲಾದಲ್ಲಿರುವ ಡೆಲ್ಲಿ ಪಬ್ಲಿಕ್ ಹೈಸ್ಕೂಲಿನಿಂದ ಮಂಗಳವಾರ ಮಧ್ಯಾಹ್ನ ಅಪಹರಣ ಮಾಡಲಾಗಿತ್ತು.
ಮಧ್ಯಾಹ್ನ ಶಾಲೆ ಮುಗಿಸಿ ಮನೆಗೆ ತೆರಳುವಾಗ ವಿರುಪ್ಪಂನನ್ನು ಶಶಿಧರ್ ಅವರ ಕಾರಿನ ಚಾಲಕ ಪವನ್ ರೆಡ್ಡಿ ಅಪಹರಿಸಿದ್ದ. ಆರು ವರ್ಷದ ಅಪಹೃತ ಮಗುವನ್ನು ಕಾರಿನಲ್ಲಿ ಕೂಡಿಸಿಕೊಂಡು ವಿಜಯವಾಡದತ್ತ ತೆರಳುತ್ತಿದ್ದ.
ಹೋಗುವಾರ ಶಶಿಧರ್ ಗೆ ಮೊಬೈಲಿನಲ್ಲಿ SMS ಕಳಿಸಿ ವಿರುಪ್ಪಂನನ್ನು ಅಪಹರಿಸಿರುವುದಾಗಿ ತಿಳಿಸುತ್ತಾ, ಮಗುವಿನ ಸುರಕ್ಷಿತ ಬಿಡುಗಡೆಗಾಗಿ 10 ಲಕ್ಷ ರು. ಒತ್ತೆ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾನೆ. ಒಂದೂವರೆ ತಿಂಗಳ ಹಿಂದೆ ಜನವಾಹನ ಸರ್ವಿಸಸ್ ಸಂಸ್ಥೆಗೆ ಸೇರಿದ ಪವನ್ ನನ್ನು ಶಶಿಧರ್ ತಮ್ಮ ಕಾರಿನ ಚಾಲಕನನ್ನಾಗಿ ನೇಮಿಸಿಕೊಂಡಿದ್ದರು.
ಮಾರ್ಗ ಮಧ್ಯೆ, ಮಾರ್ಗ ಬದಲಿಸಿದ ಪವನ್ ರೆಡ್ಡಿ ಬೀದರಿನತ್ತ ಕಾರನ್ನು ಓಡಿಸಿದ್ದ. ಈ ಮಧ್ಯೆ, ಮಗುವಿನ ಬಗ್ಗೆ ಆತಂಕಕ್ಕೊಳಗಾದ ಶಶಿಧರ್ ಅವರು ತಕ್ಷಣ ಚಂದಾನಗರ ಠಾಣೆಯ ಪೊಲೀಸರಿಗೆ SMS ತೋರಿಸಿ, ಮಗುವನ್ನು ಉಳಿಸಿಕೊಡಿ ಎಂದು ಅಲವತ್ತುಕೊಂಡಿದ್ದಾರೆ.
Prompt ಆಗಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಮೊದಲು ಮೊಬೈಲ್ ಯಾವ ಟವರ್ ನಿಂದ ಕೆಲಸ ಮಾಡುತ್ತಿದೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಅಲ್ಲಿಗೆ ಅವರ ಅರ್ಧ ಕೆಲಸ ಸಲೀಸಾಗಿದೆ. ಮೊಬೈಲ್ ಟವರ್ ಕರ್ನಾಟಕದ ಬೀದರ್ ವ್ಯಾಪ್ತಿಯಲ್ಲಿದೆ ಎಂಬುದನ್ನು ಗ್ರಹಿಸಿದ ಪೊಲೀಸರು ಬೀದರ್ ಪೊಲೀಸರ ನೆರವು ಯಾಚಿಸಿದ್ದಾರೆ.
ನಾಕಾಬಂದಿ ಹಾಕಿದ ಪೊಲೀಸರು ಕೆಲವೇ ಕ್ಷಣಗಳಲ್ಲಿ ಡ್ರೈವರ್ ಪವನ್ ಸಮೇತ ಕಾರನ್ನು ಪತ್ತೆಹಚ್ಚಿ, ವಶಕ್ಕೆ ತೆಗೆದುಕೊಂಡಿದ್ದಾರೆ. ಕಾರಿನೊಳಗೆ ಮಗು ಸುರಕ್ಷಿತವಾಗಿದ್ದನ್ನು ಕಂಡು ನಿಟ್ಟುಸಿರು ಬಿಟ್ಟಿದ್ದಾರೆ ಎಂದು ಅಪಹರಣ ಪ್ರಕರಣವನ್ನು ಭೇದಿಸಿದ ಚಂದಾನಗರ ಇನ್ಸ್ಪೆಕ್ಟರ್ ವೆಂಕಟೇಶ್ವರಲು ತಿಳಿಸಿದ್ದಾರೆ.