ವಿದೇಶಕ್ಕೆ ತೆರಳಿದ ಸಚಿವ: ವ್ಯಾಪಕ ಆಕ್ರೋಶ
ಸಚಿವರ ಜತೆಗೆ ಅಧಿಕಾರಿಗಳ ಪಟಾಲಂ ಸಹ ಇದೆ. ಸಚಿವ ನಾರಾಯಣಸ್ವಾಮಿ ಜತೆಗೆ ಮೂವರು ಅಧಿಕಾರಿಗಳೂ ವಿದೇಶ ಪ್ರವಾಸ ಭಾಗ್ಯ ಪಡೆದಿದ್ದಾರೆ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಕೆವಿ ರಾಜು, ಹಣಕಾಸು ಇಲಾಖೆಯ ಅಧಿಕಾರಿ ಸಿವಿ ನಾಗರಾಜು ಮತ್ತು ಮೂಲಸೌಕರ್ಯ ಇಲಾಖೆಯ ರಾಜ್ ಕುಮಾರ್ ಖತ್ರಿ ವಿಮಾನ ಹತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ಹಿಂದೆ ಸಾರ್ವಜನಿಕ ಸಭೆಗಳಲ್ಲಿ ಇದೇ ಸಚಿವರು ಹೊಣೆಗೇಡಿ ಅಧಿಕಾರಿಗಳ ಬಗ್ಗೆ ಅನೇಕ ಬಾರಿ ಅತೀವ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಂಡಿಟ್ಟು ಕೊಲ್ಲುವಷ್ಟು ಕೋಪ ಬರುತ್ತದೆಂದು ಗುಡುಗಿದ ನಿದರ್ಶನಗಳಿವೆ. ಆದರೆ ಈಗ ಸ್ವತಃ ಜವಾಬ್ದಾರಿ ಮರೆತು ಸಂಸಾರ ಸಮೇತ ವಿದೇಶ ಪ್ರವಾಸ ಕೈಗೊಂಡಿದ್ದಾರೆ.
ಸಚಿವರು ಸ್ವಂತ ಖರ್ಚಿನಲ್ಲೇ ವಿದೇಶ ಪ್ರವಾಸಕ್ಕೆ ಹೋಗಲಿ, ಶಿಷ್ಠಾಚಾರ ಪಾಲಿಸಿ, ಮುಖ್ಯಮಂತ್ರಿಗಳ ಅನುಮತಿಯನ್ನೂ ಪಡೆದುಕೊಂಡಿರಬಹುದು. ಆದರೆ ಸ್ವತಃ ಅವರು ಉಸ್ತುವಾರಿ ಹೊತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆಯೇ ಬರಪೀಡಿತವಾಗಿರುವಾಗ ತಮ್ಮ ಉದ್ದೇಶಿತ ಪ್ರವಾಸವನ್ನು ರದ್ದುಗೊಳಿಸಬೇಕಾಗಿರುವುದು ನೈತಿಕತೆ ಅಲ್ಲವೇ ಎಂಬುದು ಬರಗೆಟ್ಟ ಪ್ರಶ್ನೆ.
ಸಚಿವ ನಾರಾಯಣಸ್ವಾಮಿ ಅವರ ಒಂದು ವಾರದ ವಿದೇಶ ಪ್ರವಾಸದ ಬಗ್ಗೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.