ಭಾಸ್ಕರನ ಬೇಗೆಗೆ ಬೆಂದ ಬದನೆಕಾಯಿಯಾದ ಬೆಂಗಳೂರಿಗ
ಇದೇ ಬಿಸಿಲನ್ನು ಲೆಕ್ಕಿಸದೆ ಸಾವಿರಾರು ಜನ ಡಾ. ರಾಜ್ ಅವರ 84ನೇ ಜನುಮದಿನದಂದು ರಾಜ್ ಸಮಾಧಿಗೆ ಭೇಟಿ ನೀಡಿ ನಮಸ್ಕಾರ ಮಾಡಿ ಬಂದಿದ್ದಾರೆ. ರಸ್ತೆಯಲ್ಲಿ ಓಡಾಡುವ ಹೆಂಗಳೆಯರನೇಕರು ಛತ್ರಿ ಬಿಚ್ಚಿದ್ದಾರೆ, ಕೂಲಿಂಗ್ ಗ್ಲಾಸ್ ಧರಿಸಿದ್ದಾರೆ ಅಥವಾ ತಲೆಯ ಮೇಲೆ ವೇಲ್ ಇಟ್ಟುಕೊಂಡು ಓಡಾಡುತ್ತಿದ್ದಾರೆ. ಮರಗಳನ್ನು ಕಟ್ ಮಾಡಿದ ಸರಕಾರಿ ಅಧಿಕಾರಿಗಳನ್ನು ಶಪಿಸಿಕೊಂಡು ಓಡಾಡುತ್ತಿದ್ದಾರೆ.
ಮೊದಲೇ ಕುಡಿಯಲು ನೀರಿಲ್ಲ, ಆಗಾಗ ಕರೆಂಟ್ ಕೂಡ ಇರುವುದಿಲ್ಲ. ಇನ್ನು ರಸ್ತೆಯ ಮೇಲೆ ಕಾಲಿಟ್ಟರಂತೂ ಕುಕ್ಕರಿನ ಮುಚ್ಚಳ ತೆಗೆದಾಗ ಆವಿ ಮುಖಕ್ಕೆ ರಾಚಿದಂತೆ ಸೂರ್ಯ ತನ್ನ ಕಿರಣಗಳನ್ನು ಬೀರುತ್ತಿದ್ದಾನೆ. ಹತ್ತು ಗಂಟೆ ಸುಮಾರಿಗೆಲ್ಲ ಮೈಯಲ್ಲಿಂದ ಬಳಬಳ ನೀರು ಸುರಿಯಲು ಶುರು ಮಾಡಿರುತ್ತದೆ. ಹನ್ನೆರಡು ಗಂಟೆಯ ಹೊತ್ತಿಗೆ ರಸ್ತೆ ಹೆಚ್ಚೂಕಡಿಮೆ ಭಣಭಣ ಅನ್ನುತ್ತಿರುತ್ತದೆ.
ಒಂದೆರಡು ದಿನಗಳ ಹಿಂದೆ ಮೋಡ ಮುಸುಕಿ ಜನರಲ್ಲಿ ಮಳೆಯಾಗುತ್ತದೆಂಬ ಆಸೆ ಮೂಡಿತ್ತಾದರೂ, ಅದು ಗಾಳಿಗೆ ಮೋಡ ಹಾರಿಹೋದಂತೆ ಆಸೆಯೂ ಬಿಸಿಲಿಗೆ ಆವಿಯಾಗಿ ಹೋಗಿದೆ. ಜನರು ಯಪ್ಪಾ ಏನು ಸೆಕೆ, ತಡೆಯಲಿಕ್ಕೇ ಆಗುತ್ತಿಲ್ಲ ಎಂದು ಅಂಗಿ ಬನಿಯನ್ ತೆಗೆದು ಮನೆಯಲ್ಲಿ ಗಾಳಿ ಬೀಸಿಕೊಳ್ಳುತ್ತ ಕಾಲ ಕಳೆಯುತ್ತಿದ್ದಾರೆ. ಕಲ್ಲಂಗಡಿ ಹಣ್ಣು, ನಿಂಬೆ ಹಣ್ಣು, ಮಾವಿನ ಹಣ್ಣು, ಸಪೋಟಾ, ಮೋಸಂಬಿ ಮಾರಾಟಗಾರರಿಗೆ ಭರ್ಜರಿ ಲಾಭ.
ಎರಡು ವರ್ಷಗಳ ಹಿಂದೆ ಏಪ್ರಿಲ್ನಲ್ಲಿ ಅತ್ಯಧಿಕ ತಾಪಮಾನ 37.6 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು. ಈ ಬಾರಿ ಆ ದಾಖಲೆಯನ್ನು ಧೂಳಿಪಟವಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಮನೆಯಲ್ಲಿನ ಜನ ಹೊರಬರಲು ಹೆದರುತ್ತಿದ್ದಾರೆ, ರಜಾ ಇದ್ದರೂ ಮಕ್ಕಳು ಆಟದ ಮೈದಾನಕ್ಕೆ ಕಾಲಿಡುತ್ತಿಲ್ಲ. ಇನ್ನು ರಸ್ತೆಯಲ್ಲಿ ವಾಹನಗಳಲ್ಲಿ ಅಡ್ಡಾಡುವವರು ಅಳಿದುಳಿದ ಗಿಡಮರಗಳ ಕೆಳಗೆ ಆಸರೆ ಪಡೆಯುತ್ತ ಮುಂದೆ ಸಾಗುತ್ತಿದ್ದಾರೆ.
ಹವಾಮಾನ ಇಲಾಖೆ ನಿರ್ದೇಶಕ ಪುಟ್ಟಣ್ಣ ಬಿ. ಅವರ ಪ್ರಕಾರ, ಏಪ್ರಿಲ್ ತಿಂಗಳಲ್ಲಿ ಕನಿಷ್ಠ 4 ಸೆಂ.ಮೀ. ಮಳೆಯಾಗಬೇಕು. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮಳೆಯಾಗುವ ಸಂಭವನೀಯತೆಯಿದೆ. ಆದರೆ, ಆಕಾಶ ನಿರಭ್ರವಾಗಿದ್ದರಿಂದ ತಾಪಮಾನ ಇದ್ದಕ್ಕಿದ್ದಂತೆ ಹೆಚ್ಚಾಗಿದೆ. ರಾಜ್ಯದಲ್ಲಿ ಅನೇಕ ಕಡೆಗಳಲ್ಲಿ ಮಳೆಯಾಗಿದ್ದರೂ ವರುಣದೇವ ಬೆಂಗಳೂರು ಮತ್ತು ಕೋಲಾರದ ಮೇಲೆ ಕರುಣೆ ತೋರಿಲ್ಲ. ಮಳೆಯಾದರೇ ಸೈ, ಇಲ್ಲದಿದ್ದರೆ ಸೂರ್ಯ ಜನರನ್ನು ಬೇಯಿಸಿ ಬದನೆಕಾಯಿ ಮಾಡುವುದು ಖಚಿತ.