ವರದಿಗಾರಿಕೆ ಕೀಳು? ಸಮೀಕ್ಷೆ ಕಸದಬುಟ್ಟಿಗೆ ಹಾಕಿ
ಕಸಾಯಿ, ಹೋಟೆಲ್ ಮಾಣಿ, ಪಾತ್ರೆ ತೊಳೆಯುವವರಿಗಿಂತ ವರದಿ ಮಾಡುವವರ ವೃತ್ತಿ ಅಂತಹ ಘನತೆಯದಲ್ಲ ಎಂದು ಸಮೀಕ್ಷೆ ಬಹಿರಂಗಪಡಿಸಿತ್ತು. ಆಯಾ ವೃತ್ತಿಯಲ್ಲಿ ಸಿಗುವ ಕೆಲಸ, ತರುವ ಆದಾಯ, ಎದುರಿಸಬೇಕಾದ ಒತ್ತಡ ಮುಂತಾದವುಗಳನ್ನು ಪರಿಗಣಿಸಿ ಕರಿಯರ್ಕಾಸ್ಟ್ ಸಂಸ್ಥೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು.
ಈ ಸರ್ವೆಯ ಬಗ್ಗೆ ಕಿಡಿಕಾರುತ್ತಿರುವ ಪತ್ರಕರ್ತರು, ತಮ್ಮ ವೃತ್ತಿಯೇ ಅತ್ಯುನ್ನತವಾದದ್ದು ಎಂದು ಚೀರಿ ಹೇಳುತ್ತಿದ್ದಾರೆ. ಆ ಸಮೀಕ್ಷೆಯನ್ನು ಕಸದ ಬುಟ್ಟಿಗೆ ಹಾಕಿರಿ ಎಂದು ಕಿಡಿಕಾರುತ್ತಿದ್ದಾರೆ. ಸಂಬಳ ಸಾಫ್ಟ್ವೇರ್ ವೃತ್ತಿಗಿಂತ ಕಡಿಮೆಯಿರಬಹುದು ಆದರೆ, ಎದುರಿಸಬೇಕಾದ ಸವಾಲುಗಳು ಸಾಫ್ಟ್ವೇರ್ ಇಂಜಿನಿಯರುಗಳಿಗಿಂತ ಕಠಿಣವಾಗಿರುತ್ತದೆ ಎಂಬುದು ಅವರ ವಾದ.
ಪತ್ರಿಕೋದ್ಯಮದಲ್ಲಿ ಉನ್ನತ ಹುದ್ದೆ ಸಿಗುವುದು ಬಲು ಕಷ್ಟ, ಇಷ್ಟಪಟ್ಟಂತೆ ಸಂಬಳ ಸಿಗುವುದು ಇನ್ನೂ ಕಷ್ಟ, ಬೇಕಾಬಿಟ್ಟಿ ಕೆಲಸದ ವೇಳೆ, ಕೆಲಸದ ಭದ್ರತೆ ಇರುವುದಿಲ್ಲ, ಸಿಗಬೇಕಾದ ಮನ್ನಣೆ ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ. ಎಲ್ಲ ನಿಜ. ಆದರೆ, ವರದಿಗಾರಿಗೆ ಬೇಕಾಗಿರುವ ನೈಪುಣ್ಯತೆ ವಿಭಿನ್ನವಾದುದು. ಪ್ರತಿ ಹಂತದಲ್ಲೂ ಕ್ಲಿಷ್ಟಕರ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಈ ಎಲ್ಲ ಅಂಶಗಳನ್ನು ಸಮೀಕ್ಷೆ ಪರಿಗಣಿಸಿಯಿಲ್ಲ. ಸಂಬಳವನ್ನು ಆಧಾರವಾಗಿಟ್ಟುಕೊಂಡು ವೃತ್ತಿಯ ಘನತೆಯನ್ನು ಅಳೆಯಬಾರದು ಎಂಬುದು ಪತ್ರಕರ್ತರ ವಾದ. ಬೇರೆ ವೃತ್ತಿಗಳು ಯಾರಿಗೆ ಬೇಕಾದರೂ ಒಲಿಯಬಹುದು, ಆದರೆ, ವರದಿಗಾರಿಕೆಯ ವೃತ್ತಿ ಒಲಿಯುವುದು ಕೆಲವರಿಗೆ ಮಾತ್ರ. ಇದೊಂದು ಅದ್ಭುತವಾದ ವೃತ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಪತ್ರಕರ್ತನ ವೃತ್ತಿ ಯಾಕೆ ಮೇಲ್ಮಟ್ಟದ್ದು ಎಂಬ ಬಗ್ಗೆ ಕೆಲ ಕಾರಣಗಳನ್ನು ಇಲ್ಲಿ ನೀಡಲಾಗಿದೆ. ಓದಿಕೊಳ್ಳಿ. ಅವನ್ನು ಒಪ್ತೀರೋ, ಇಲ್ಲವೋ ನಂತರ ಹೇಳಿರಿ.