ಮೌಲ್ಯಮಾಪನ ಗೊಂದಲ : ಸಿಇಟಿ ಪರೀಕ್ಷೆ ಮುಂದೂಡಿಕೆ
ಈ ಕುರಿತು ಒನ್ಇಂಡಿಯಾ ಕನ್ನಡದೊಡನೆ ಮಾತನಾಡಿದ ಕರ್ನಾಟಕ ಪರೀಕ್ಷಾ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕಿ ರಶ್ಮಿ ವಿ. ಮಹೇಶ್ ಅವರು, ಮೊದಲು ದ್ವಿತೀಯ ಪಿಯುಸಿ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ಬಯಲಾದವು, ನಂತರ ಶಿಕ್ಷಕರಿಂದ ಮೌಲ್ಯಮಾಪನವನ್ನು ಬಹಿಷ್ಕರಿಸಲಾಯಿತು. ಈ ಎಲ್ಲ ಘಟನೆಗಳ ಪರಿಣಾಮ ಸಿಇಟಿ ಮೇಲೂ ಆಯಿತು ಎಂದು ತಿಳಿಸಿದರು.
ಸಿಇಟಿ ಪರೀಕ್ಷೆಗಳು ಮುಗಿದು ಹತ್ತು ದಿನದೊಳಗೆ, ಅಂದರೆ ಜೂನ್ ಮೊದಲ ವಾರದಲ್ಲಿ ಸಿಇಟಿ ಫಲಿತಾಂಶ ಹೊರಬೀಳಲಿದೆ ಎಂದು ರಶ್ಮಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಮೇ ಎರಡನೇ ವಾರದಲ್ಲಿ ಹೊರಬೀಳುವ ಸಂಭವನೀಯತೆಯಿದೆ. [ದ್ವಿತೀಯ ಪಿಯುಸಿ ಫಲಿತಾಂಶ ಒನ್ಇಂಡಿಯಾ-ಕನ್ನಡದಲ್ಲಿ ಪ್ರಕಟವಾಗಲಿದೆ, ನಿರೀಕ್ಷಿಸಿ.]
ಈ ಮೊದಲು ಸಿಇಟಿಯನ್ನು ಮೇ 3 ಮತ್ತು 4ರಂದು ನಿಗದಿಪಡಿಸಲಾಗಿತ್ತು. ಮೇ 3, ಗುರುವಾರ ಜೀವಶಾಸ್ತ್ರ ಮತ್ತು ಗಣಿತ ಪರೀಕ್ಷೆಗಳಿದ್ದವು. ಮೇ 4, ಶುಕ್ರವಾರ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯಬೇಕಿದ್ದವು. ಹೊರನಾಡ ವಿದ್ಯಾರ್ಥಿಗಳಿಗೆ ಮತ್ತು ಗಡಿನಾಡ ವಿದ್ಯಾರ್ಥಿಗಳಿಗೆ ಕನ್ನಡ ಪರೀಕ್ಷೆಯನ್ನು ಮೇ 5, ಶನಿವಾರ ನಿಗದಿಪಡಿಸಲಾಗಿತ್ತು.
ದ್ವಿತೀಯ ಪರೀಕ್ಷೆ ಮೌಲ್ಯಮಾಪನ ಏ. 17ರಿಂದ ಮತ್ತೆ ಆರಂಭವಾಗಿದ್ದು, ಮೇ ಎರಡನೇ ವಾರದಲ್ಲಿ ಫಲಿತಾಂಶ ಹೊರಬೀಳುವ ಸಂಭವನೀಯತೆಯಿದೆ. ನಿಗದಿತ ಸಮಯದಲ್ಲಿ ಮೌಲ್ಯಮಾಪನ ಮುಗಿದಿದ್ದರೆ ಏ.19ರೊಳಗಾಗಿ ಮೌಲ್ಯಮಾಪನ ಮುಕ್ತಾಯವಾಗಬೇಕಿತ್ತು. ಆದರೆ, ಹೆಚ್ಚಿನ ವೇತನ ಆಗ್ರಹಿಸಿ ಉಪನ್ಯಾಸಕರು ಮೌಲ್ಯಮಾಪನವನ್ನು ಬಹಿಷ್ಕರಿಸಿದ್ದರು. ನಂತರ ಏ.16ರ ಸಂಜೆ ಬರಿಷ್ಕಾರ ಹಿಂತೆಗೆದುಕೊಂಡರು.