ಕಾರ್ಕೋಟಕ ಸರ್ಪ ಕರ್ನಾಟಕಕ್ಕೆ ನೀರುಣಿಸಬೇಡಿ
ರಾಜ್ಯ ಸರಕಾರ ಹಾವಿಗೆ (ಕರ್ನಾಟಕ) ಹಾಲುಣಿಸುವ ಗುತ್ತಿಗೆ ವಹಿಸಿಕೊಂಡಂತೆ ಕಾಣುತ್ತಿದೆ. ಕರ್ನಾಟಕದಲ್ಲಿ ಮರಾಠಿ ಭಾಷಿಕರ ಮೇಲೆ ನಿರಂತರ ದೌರ್ಜನ್ಯ ನಡೆಸಲಾಗುತ್ತಿದೆ. ಆದರೆ ನಮ್ಮ ಸರಕಾರ ಆ ದೌರ್ಜನ್ಯಗಳನ್ನೆಲ್ಲ ಮರೆತು ಆ ರಾಜ್ಯಕ್ಕೆ ನೀರು ಒದಗಿಸಲು ತೀರ್ಮಾನಿಸಿದೆ. ಕರ್ನಾಟಕದ ಮರಾಠಿ ಭಾಷಿಕರಿಗೆ ಅನ್ಯಾಯ ಮಾಡುತ್ತಿರುವ ಕರ್ನಾಟಕ ಸರಕಾರಕ್ಕೆ ಒಂದೂ ಹನಿ ನೀರು ನೀಡಬಾರದು ಎಂದು ಪಕ್ಷದ ಮುಖವಾಣಿ 'ಸಾಮ್ನಾ' ಸಂಪಾದಕೀಯದಲ್ಲಿ ಠಾಕ್ರೆ ಹೇಳಿದ್ದಾರೆ.
ಬೆಳಗಾವಿ ಗಡಿ ವಿವಾದ ಸುದೀರ್ಘ ಕಾಲದಿಂದ ಇದ್ದರೂ ಉಭಯ ರಾಜ್ಯಗಳ ಬರ ಪೀಡಿತ ಜಿಲ್ಲೆಗಳಿಗೆ ಪರಸ್ಪರ ನೀರು ಹಂಚಿಕೊಳ್ಳಲು ಕರ್ನಾಟಕ ಮತ್ತು ಮಹಾರಾಷ್ಟ್ರ ಸರಕಾರಗಳು ಇತ್ತೀಚೆಗೆ ಒಪ್ಪಿಕೊಂಡಿವೆ. ಕರ್ನಾಟಕದ ಗಡಿಭಾಗದ ಜಿಲ್ಲೆಗಳಿಗೆ ದೂಧ್ಗಂಗಾ ಮತ್ತು ವರಣಾ ನದಿಗಳ ಜಲ ಪೂರೈಸಲು ಮಹಾರಾಷ್ಟ್ರ ಸರಕಾರ ಒಪ್ಪಿದರೆ, ಇದಕ್ಕೆ ಪ್ರತಿಯಾಗಿ ಕರ್ನಾಟಕ ಸರಕಾರ ಪಶ್ಚಿಮ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಬರ ಪೀಡಿತ ಜಾತ್ ತಾಲೂಕಿಗೆ ನೀರು ಪೂರೈಸಲು ಸಮ್ಮತಿಸಿದೆ.
ಕರ್ನಾಟಕ ಸಚಿವರಾದ ಉಮೇಶ್ ಕತ್ತಿ ಮತ್ತು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರನ್ನೊಳಗೊಂಡ ನಿಯೋಗ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವೀರಾಜ್ ಚವಾಣ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿತ್ತು. ಮಹಾರಾಷ್ಟ್ರದ ಕಾಂಗ್ರೆಸ್ ನೇತೃತ್ವದ ಸರಕಾರ ಮತ್ತು ಕರ್ನಾಟಕದ ಬಿಜೆಪಿ ಸರಕಾರ ಗಡಿ ವಿವಾದದ ರಾಜಕೀಯವನ್ನು ಬದಿಗಿಡಲು ಕೂಡಾ ತೀರ್ಮಾನಿಸಿವೆ.