ಸಿಎಂ ಪಟ್ಟ: ದಿಲ್ಲಿ ದಂಡಯಾತ್ರೆ ಕೈಬಿಟ್ಟ ಯಡಿಯೂರಪ್ಪ
ಮತ್ತೆ ಮುಖ್ಯಮಂತ್ರಿ ಪಟ್ಟಕ್ಕೇರಲು ಒಂದೇ ಸಮನೆ ಯತ್ನಿಸುತ್ತಿರುವ ಯಡಿಯೂರಪ್ಪ ಇಂದು ದೆಹಲಿಗೆ ತೆರಳಲು ಮೊದಲೇ ನಿರ್ಧರಿಸಿದ್ದರು. ಕಾರಣ ಬಿಜೆಪಿ ಹೈಕಮಾಂಡ್ ತಮಗೆ ನೀಡಿದ್ದ ಗಡುವು ಮುಗಿಯಿತು. ಹಾಗಾಗಿ ಮತ್ತೆ ಸಿಎಂ ಪಟ್ಟ ಕೋರಿ ಅಹವಾಲು ಸಲ್ಲಿಸುವುದು ಯಡಿಯೂರಪ್ಪನವರ ಎಣಿಕೆಯಾಗಿತ್ತು.
ಆದರೆ ಆಂತರ್ಯದಲ್ಲಿ ಸದ್ಯಕ್ಕೆ ಕಡುವಿರೋಧಿಯಾಗಿ ಮಾರ್ಪಟ್ಟಿರುವ ಸದಾನಂದ ಗೌಡ ಮತ್ತು ಈಶ್ವರಪ್ಪ ಅವರುಗಳು ವರಿಷ್ಠರೊಂದಿಗೆ ಮಾತುಕತೆ ನಡೆಸಲು ಈಗಾಗಲೇ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ಅವರು ವರಿಷ್ಠರೆದುರು ತಮ್ಮ ವಿರುದ್ಧ ಮಾತನಾಡುವ ಮುನ್ನ ತಮ್ಮ ಅಹವಾಲನ್ನು ಮಂಡಿಸುವುದು ಯಡಿಯೂರಪ್ಪನವರ ಇರಾದೆಯಾಗಿತ್ತು. ಆದರೆ ಈಗ... ಎಲ್ಲಾ ತಿರುವುಮರುವು ಆಗಿದೆ.
'ಕೋರ್ಟ್ ಕೇಸುಗಳಿಂದ ಮುಕ್ತಿ ಪಡೆಯದ ಹೊರತು ಮತ್ತೆ ಸಿಎಂ ಪಟ್ಟ ಇಲ್ಲವೇ ಇಲ್ಲ' ಎಂದು ಬಿಜೆಪಿ ವರಿಷ್ಠರು ನೋರೆಂಟು ಬಾರಿ ಸ್ಪಷ್ಟಪಡಿಸಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮತ್ತು ತಾಜಾ ಆಗಿ ಹೈಕೋರ್ಟ್ ವಿಭಾಗೀಯ ಪೀಠ ತಮ್ಮ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದರಿಂದ ಮತ್ತೆ ವರಿಷ್ಠರೆದುರು ಸಿಎಂ ಪಟ್ಟಕ್ಕಾಗಿ ಗುಂಜಾಡಿದರೆ ಯಡವಟ್ಟಾದೀತೆಂದು ಯಡಿಯೂರಪ್ಪನವರು ಅಂತಿಮ ಕ್ಷಣದಲ್ಲಿ ದೆಹಲಿ ದಂಡ ಯಾತ್ರೆಯಿಂದ ಹಿಂದೆಸರಿದು, ಮತ್ತೊಮ್ಮೆ ಮುಖಭಂಗವಾಗುವುದನ್ನು ತಪ್ಪಿಸಿಕೊಂಡಿದ್ದಾರೆ.