ಮೌಲ್ಯಮಾಪನ ಬಹಿಷ್ಕಾರ : ಆತಂಕದಲ್ಲಿ ಪಿಯು ವಿದ್ಯಾರ್ಥಿಗಳು
ಈ ಬೇಡಿಕೆಗಳ ಬಗ್ಗೆ ನಿಖರ ನಿಲುವನ್ನು ಪ್ರಕಟಿಸಿದ ಸರಕಾರ ಕೂಡ, ತಾನು ಮಾತುಕತೆಗೆ ಸಿದ್ಧವಾಗಿರುವುದಾಗಿ ಹೇಳಿದೆ. ಕೂಡಲೆ ಪ್ರತಿಭಟನೆ ಕೈಬಿಟ್ಟು ಮೌಲ್ಯ ಮಾಪನ ಶುರುಮಾಡದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಎಚ್ಚರಿಕೆ ನೀಡಿದೆ. ಆದರೆ, ಶಿಕ್ಷಕರು ಬಗ್ಗುವ ಲಕ್ಷಣ ಕಾಣುತ್ತಿಲ್ಲ.
ಶಿಕ್ಷಕರು ಮತ್ತು ಬಿಜೆಪಿ ಸರಕಾರದ ಜಟಾಪಟಿಯಿಂದ ತೀವ್ರ ಗಲಿಬಿಲಿಗೊಳಗಾಗಿರುವವರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು. ಪ್ರತಿಭಟನೆಯಿಂದಾಗಿ ಮೌಲ್ಯಮಾಪನದ ಗುಣಮಟ್ಟ ಕುಸಿಯುವ ಆತಂಕದಲ್ಲಿ ವಿದ್ಯಾರ್ಥಿಗಳಿದ್ದಾರೆ. ಇವರಿಬ್ಬರ ತಾಕಲಾಟ ತಮ್ಮ ಮುಂದಿನ ಭವಿಷ್ಯಕ್ಕೆ ಧಕ್ಕೆ ತರಬಾರದೆಂದು ಆಶಿಸುತ್ತಿದ್ದಾರೆ. ತಮ್ಮ ಈ ಪ್ರತಿಭಟನೆಯಿಂದ ಮೌಲ್ಯಮಾಪನದ ಮೇಲೆ ಯಾವುದೇ ಹಿನ್ನಡೆಯಾಗುವುದಿಲ್ಲ ಎಂದು ಶಿಕ್ಷಕರು ಭರವಸೆ ನೀಡಿದ್ದಾರೆ.
ಏ.19ರಂದು ಪ್ರತಿಭಟನೆಗೆ ಕುಳಿತಿರುವ ಶಿಕ್ಷಕರ ಜೊತೆ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ವಾಗ್ದಾನ ನೀಡಿದ್ದಾರೆ. ಪಟ್ಟು ಬಿಡದ ಶಿಕ್ಷಕರು ಮಾತುಕತೆ ನಡೆಸಿ, ಬೇಡಿಕೆಗಳನ್ನು ಒಪ್ಪಿಕೊಂಡ ನಂತರವೇ ಪ್ರತಿಭಟನೆ ಕೈಬಿಡುವುದಾಗಿ ನುಡಿದಿದ್ದಾರೆ. 19 ದಿನಾಂಕದಂದು ಬೇಡಿಕೆಗಳನ್ನು ಒಪ್ಪಿದರೂ, ದ್ವಿತೀಯ ಪಿಯುಸಿ ಫಲಿತಾಂಶ ಹೊರಬರಲು ತಡವಾಗುವುದಿಲ್ಲ ಎಂದು ಶಿಕ್ಷಕರು ಹೇಳಿದ್ದಾರೆ.
ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ಹಿಂದೆಮುಂದೆ ನೋಡುತ್ತಿರುವ ಬಿಜೆಪಿ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ಎಚ್ ವಿಶ್ವನಾಥ್ ಅವರು, ಶಿಕ್ಷಕರ ಎಲ್ಲ ಬೇಡಿಕೆಗಳು ಪೂರೈಕೆಗೆ ಅರ್ಹವಾಗಿವೆ. ಕೂಡಲೆ ಸರಕಾರ ಕ್ರಮ ತೆಗೆದುಕೊಂಡು ಮೌಲ್ಯಮಾಪನಕ್ಕೆ ಸರಕಾರ ದಾರಿ ಮಾಡಿಕೊಡಬೇಕು ಎಂದು ಹೇಳಿದ್ದಾರೆ.