ಲಾರಿಗೆ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ : ಐವರ ಸಾವು
ಈ ಅಪಘಾತ ಸೇಲಂ ಮತ್ತು ಮದುರೈ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಪುದುಚೆಟ್ಟಿರಂ ಬಳಿ ನಡೆದಿದೆ. ಬಸ್ಸಿನ ಚಾಲಕ ತೂಕಡಿಸುತ್ತಿದ್ದರಿಂದ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಯ ಹಿಂಬದಿಗೆ ಗುದ್ದಿದ್ದಾನೆ. ಢಿಕ್ಕಿ ಹೊಡೆದ ರಭಸಕ್ಕೆ ಬಸ್ಸಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಬಸ್ಸು ಬೆಂಗಳೂರಿನಿಂದ ಮೂರು ದಿನಗಳ ಪುಣ್ಯಕ್ಷೇತ್ರ ದರ್ಶನಕ್ಕೆಂದು ತಂಜಾವೂರಿಗೆ ತೆರಳುತ್ತಿತ್ತು. ದೇವರ ದರುಶನಕ್ಕೆಂದು ತೆರಳುತ್ತಿದ್ದ ದುರ್ದೈವಿಗಳು ದೇವರ ಪಾದ ಸೇರಿದಂತಾಗಿದೆ. ಸತ್ತವರನ್ನು ಪ್ರವಾಸಿ ಮಾರ್ಗದರ್ಶಿ ಕೆ. ಕರುಣಾನಿಧಿ (41), ಅವರ ಮಗ ಕೆ. ನವೀನ್ (24), ಬೆಂಗಳೂರಿನ ಪ್ರವಾಸಿಗರಾದ ಎಸ್ ದೇವನ್ (50) ಮತ್ತು ಎಸ್ ಉಮಾ (50) ಮತ್ತು ಸೇಲಂನ ವೈ ಧನಲಕ್ಷ್ಮಿ.
ಇವರಲ್ಲಿ ನಾಲ್ವರು ಸ್ಥಳದಲ್ಲಿಯೇ ಮೃತರಾದರೆ ಇನ್ನೊಬ್ಬರು ನಮಕ್ಕಲ್ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯುವಾಗ ತೀರಿಕೊಂಡಿದ್ದಾರೆ. ನಿದ್ದೆ ಮಂಪರಿನಲ್ಲಿ ಬಸ್ ಓಡಿಸುತ್ತಿದ್ದ ಚಾಲಕ ಕೆಆರ್ ನಾಗೇಶ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಗಾಯಾಳುಗಳಿಗೆ ನಮಕ್ಕಲ್ ನಲ್ಲಿರುವ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಗಾಯಗೊಂಡವರಲ್ಲಿ 11 ವರ್ಷದ ಬಾಲಕನ ಸ್ಥಿತಿ ಗಂಭೀರವಾಗಿದೆ.