ಕುಮಾರಸ್ವಾಮಿ ವಂಚನೆಗಿಂತ 'ಸದಾ' ಮೋಸ ದೊಡ್ಡದು
ಬೆಂಗಳೂರು, ಏ.12: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಸದಾನಂದ ಗೌಡರ ನಡುವಿನ ಸಂಬಂಧ ಹಳಸಿದೆ ಎಂಬುದು ಹೊಸ ಸುದ್ದಿಯೇನೂ ಅಲ್ಲ. ಮೂರ್ನಾಲ್ಕು ತಿಂಗಳಿಂದ ಇವರಿಬ್ಬರ ಮಧ್ಯೆ ನಡೆಯುತ್ತಿರುವ ಮುಸುಕಿನ ಗುದ್ದಾಟ ಈಗ ಮತ್ತೊಮ್ಮೆ ಬಹಿರಂಗವಾಗಿದೆ ಅಷ್ಟೇ. ಉದಯವಾಣಿ ದಿನಪತ್ರಿಕೆಗೆ ಯಡಿಯೂರಪ್ಪ ನೀಡಿರುವ ಸಂದರ್ಶನದಲ್ಲಿ ಗೌಡರ ಕುರಿತು ಬಿ.ಎಸ್.ವೈ ಭರಪೂರವಾಗಿ ಕಿಡಿಕಾರಿದ್ದಾರೆ. ಸಂದರ್ಶಕರು ಹಿರಿಯ ವರದಿಗಾರ ಎಸ್. ಗಿರೀಶ್ ಬಾಬು. ಮುಖ್ಯಾಂಶಗಳು:
* ಮುಖ್ಯಮಂತ್ರಿ ಸದಾನಂದ ಗೌಡರು ಬಿಜೆಪಿ ಶಾಸಕರ ಸಲಹೆಗಳಿಗಿಂತ ದೇವೇಗೌಡರು, ಕುಮಾರಸ್ವಾಮಿ ಹಾಗೂ ವೈಎಸ್ವಿ ದತ್ತಾರ ಸಲಹೆ ಕೇಳುವುದೇ ಹೆಚ್ಚು.
* ಅಂದು ಸದಾನಂದ ಗೌಡರು ತಮಗೂ, 70 ಶಾಸಕರಿಗೂ ಹಾಗೂ ದೇವರಿಗೂ ಭಾಷೆ ಕೊಟ್ಟು ಮುಖ್ಯಮಂತ್ರಿಯಾದರು. ಇಂದು ಆ ಭಾಷೆಯನ್ನು ಮರೆತು ಕುರ್ಚಿಗೆ ಅಂಟಿ ಕುಳಿತಿದ್ದಾರೆ.
* ತಮಗೆ ಅಂದು ಕುಮಾರಸ್ವಾಮಿ ಮಾಡಿದ ದ್ರೋಹಕ್ಕಿಂತ ಇಂದು ಸದಾನಂದ ಗೌಡರು ಮಾಡುತ್ತಿರುವ ದ್ರೋಹ ನನಗೆ ಹೆಚ್ಚು ನೋವು ತಂದಿದೆ.
* ತಾವೆಂದೂ ಮುಖ್ಯಮಂತ್ರಿ ಸದಾನಂದ ಗೌಡರ ಕುರಿತು ಬಹಿರಂಗವಾಗಿ ಕೆಟ್ಟದಾಗಿ ಮಾತನಾಡಿಲ್ಲ. ಆದರೆ, ಸದಾನಂದಗೌಡರು ಮಾತ್ರ ಮುಂಬೈನಿಂದ ಹಿಡಿದು ಚಿಕ್ಕಮಗಳೂರಿನವರೆಗೆ, ಮಂಗಳೂರಿನಿಂದ ಹಿಡಿದು ಬೆಂಗಳೂರಿನವರೆಗೆ ತಮ್ಮ ವಿರುದ್ಧ ಕಟಕಿಯಾಡುತ್ತಲೇ ಇದ್ದಾರೆ, ನನ್ನನ್ನು ಶತ್ರುವಿನ ರೀತಿ ನೋಡುತ್ತಿದ್ದಾರೆ.
* ಅವರು ನನ್ನ ಸಲಹೆ ಕೇಳುವುದನ್ನು ನಿಲ್ಲಿಸಿದ್ದಾರೆ. ನಾನೂ ಸಲಹೆ ಕೊಡುವುದನ್ನು ನಿಲ್ಲಿಸಿದ್ದೇನೆ. ಕೆಎಂಎಫ್ ಅಧ್ಯಕ್ಷ ಪದವಿ ಕೊಡಿಸಿ ಎಂದು ಕೇಳುತಿದ್ದ ಸದಾನಂದಗೌಡರಿಗೆ ನಾನು ಮುಖ್ಯಮಂತ್ರಿ ಪಟ್ಟ ಕೊಟ್ಟಿದ್ದಕ್ಕೆ ನನಗೆ ಸಿಕ್ಕ ಪ್ರತಿಫಲ ಇದು.
* ಹತಾಶ ಮನಸ್ಥಿತಿಯಲ್ಲಿ ಸದಾನಂದರು ತಮ್ಮ ಮುಖ್ಯಮಂತ್ರಿ ಕಚೇರಿಯಿಂದ ಒಬ್ಬೊಬ್ಬರನ್ನೇ ತೆಗೆದುಹಾಕುತ್ತಿದ್ದಾರೆ. ಬಹುಶಃ ಮುಂದೆ ಏನಾಗುತ್ತದೆ ಎಂಬುದು ಸದಾನಂದಗೌಡರಿಗೆ ಅರಿವಾಗಿರಬಹುದು.
* ನಾನು ಮತ್ತೆ ಮುಖ್ಯಮಂತ್ರಿಯೇ ಆಗಬೇಕು ಅಂತ ಬಹುತೇಕ ಬಿಜೆಪಿ ಶಾಸಕರ ಒತ್ತಾಯ. ನನಗೆ ಕೊಟ್ಟರೇ ಮುಖ್ಯಮಂತ್ರಿ ಸ್ಥಾನ ಮಾತ್ರ ಕೊಡುತ್ತಾರೆ. ಈ ಬಗ್ಗೆ ಸಂಶಯವೇ ಬೇಡ. ಇದಕ್ಕೆ ಹೈಕಮಾಂಡ್ ಮನ್ನಣೆ ನೀಡುತ್ತದೆ ಎಂಬುದು ನನ್ನ ಗಟ್ಟಿ ವಿಶ್ವಾಸ.
* ಜೆಡಿಎಸ್ನ ಕುಮಾರಸ್ವಾಮಿ ಅಧಿಕಾರ ಹಸ್ತಾಂತರ ವೇಳೆ ನನಗೆ ಮಾಡಿದ ವಂಚನೆಗಿಂತ ದೊಡ್ಡ ಮೋಸ ಸದಾನಂದಗೌಡರಿಂದ ಆಗಿದೆ. ದೇವರ ಮೇಲೆ ಆಣೆ ಮಾಡಿ ಮಾತು ತಪ್ಪಿದ್ದಾರೆ. ಅಷ್ಟೇ ಅಲ್ಲ ನನ್ನ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ.
* ನಾನು ಯಾವತ್ತು ಸದಾನಂದಗೌಡರ ವಿರುದ್ಧ ಕೂಗಾಡಿಲ್ಲ. ಆದರೆ, ಮನೆಗೆ ಕರೆಸಿಕೊಂಡು ಕೊಟ್ಟ ಮಾತಿನಂತೆ ರಾಜೀನಾಮೆ ನೀಡು ಎಂದು ಹೇಳಿದ್ದು ನಿಜ. ಅಷ್ಟೇ ಅಲ್ಲ, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಡ ಎಂದೂ ನಾನು ಹೇಳಿದ್ದೆ. ನನ್ನ ಪ್ರಕಾರ ಸದಾನಂದಗೌಡರು ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವ ಅಗತ್ಯವಿರಲಿಲ್ಲ. ಇದನ್ನು ನೇರವಾಗಿ ಅವರಿಗೆ ಹೇಳಿದ್ದೆ. ಉಳಿದದ್ದೆಲ್ಲಾ ಊಹಾಪೋಹ.