ಹರಳೂರು ವೀರಭದ್ರಸ್ವಾಮಿಯ ವೈಭವದ ರಥೋತ್ಸವ
ತುಮಕೂರು, ಏ. 12 : ತುಮಕೂರು ತಾಲೂಕು ಹರಳೂರು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರಸ್ವಾಮಿಯ ವೈಭವದ ರಥೋತ್ಸವ ಏಪ್ರಿಲ್ 12ರಂದು ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವ ಹಾಗೂ ಶ್ರದ್ಧಾಭಕ್ತಿಗಳಿಂದ ನೆರವೇರಿತು.
ರಥೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ರಥಾಂಗಹೋಮ, ರಥಪ್ರತಿಷ್ಠೆ, ಧೂಳೋತ್ಸವ, ಪುಷ್ಪಾಲಂಕಾರ, ಸಿಂಹವಾಹನೋತ್ಸವ ಸೇರಿದಂತೆ ಹಲವಾರು ಧಾರ್ಮಿಕ ಪೂಜಾದಿಗಳು ನಡೆದವು. ತುಮಕೂರು ಸೇರಿದಂತೆ ವಿವಿಧೆಡೆಗಳಿಂದ ಸಹಸ್ರಾರು ಭಕ್ತಾದಿಗಳು ಈ ಸಂಭ್ರಮದ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ವಸತಿ ಸಚಿವ ವಿ. ಸೋಮಣ್ಣ, ಗ್ರಾಮಾಂತರ ಶಾಸಕ ಬಿ. ಸುರೇಶ್ಗೌಡ, ಬೆಂಗಳೂರಿನ ದಾನಿ ನಾರಾಯಣಸ್ವಾಮಿ ರೆಡ್ಡಿ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ನಿರ್ದೇಶಕ ಎಚ್.ಕೆ. ಕುಮಾರಯ್ಯ, ಹರಳೂರು ಜಿ.ಪಂ ಸದಸ್ಯ ರಾಮಚಂದ್ರಯ್ಯ, ಹರಳೂರು ಗ್ರಾ.ಪಂ ಅಧ್ಯಕ್ಷ ಬಿ.ಕೆ.ಆನಂದ್, ರೇಣುಕಾರಾಧ್ಯ ಸೇರಿದಂತೆ ಹರಳೂರು ಹಾಗೂ ಸುತ್ತಮುತ್ತಲ ವಿವಿಧ ಗ್ರಾಮ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಸದಸ್ಯರುಗಳು, ಮುಖಂಡರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಏಪ್ರಿಲ್ 13ರಂದು ನಂದಿವಾಹನ, ಏಪ್ರಿಲ್ 14ರಂದು ಅಕ್ಕಿಪೂಜಾ ಅಲಂಕಾರ, ಪಲ್ಲಕ್ಕಿ ಉತ್ಸವ, ಸಿಂಹ ವಾಹನೋತ್ಸವ, ಮುತ್ತಿನಪಾಲಕಿ ಉತ್ಸವ, ಏಪ್ರಿಲ್ 15ರಂದು ತಿರುಗಣಿ ಉತ್ಸವ, ರಾತ್ರಿ 9 ಗಂಟೆಗೆ ಶ್ರೀಕೃಷ್ಣ ಸಂಧಾನ ಪೌರಾಣಿಕ ನಾಟಕ ಹಾಗೂ ಏಪ್ರಿಲ್ 16ರಂದು ಓಕುಳಿ ಮೆರವಣಿಗೆ ನಡೆಯಲಿವೆ.