ಮತ್ತೆ ಕಂಪನ, ಕರ್ನಾಟಕ ಕರಾವಳಿಯಲ್ಲಿ ಕಟ್ಟೆಚ್ಚರ
ಈ ಹಿನ್ನೆಲೆಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸಮುದ್ರಮಟ್ಟ ಮತ್ತು ಕೆಳಮಟ್ಟದಲ್ಲಿರುವ ಜನರಿಗೆ ಎತ್ತರದ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ. ನಾಲ್ಕು ಮೀಟರ್ ಎತ್ತರದ ಕಡಲ ಅಲೆಗಳು ದ್ವೀಪವನ್ನು ಅಪ್ಪಳಿಸಬಹುದೆಂದು ಎಚ್ಚರಿಸಲಾಗಿದೆ. ಜನರನ್ನು ರಕ್ಷಿಸಲೆಂದು 80 ಸಿಬ್ಬಂದಿಗಳಿರುವ ಎರಡು ಯುದ್ಧ ವಿಮಾನಗಳನ್ನು ಪೋರ್ಟ್ ಬ್ಲೇರ್ಗೆ ಈಗಾಗಲೆ ರವಾನೆಯಾಗಿವೆ. ದಕ್ಷಿಣ ಅಂಡಮಾನ್ನಿಂದ ಜನರನ್ನು ಸ್ಥಳಾಂತರಿಸುವ ಕಾರ್ಯ ಆರಂಭವಾಗಿದೆ.
ಇಂಡೋನೇಷ್ಯಾದ ಸುಮಾತ್ರಾದಲ್ಲಿ ಭೂಮಿ ಕಂಪಿಸಿದ ನಂತರ ಬೆಂಗಳೂರು, ಮೆಟ್ರೋಗಳು ಸೇರಿದಂತೆ ಭಾರತದ ಅನೇಕ ಪ್ರದೇಶಗಳಲ್ಲಿ ಐದಾರು ಸೆಕೆಂಡುಗಳ ಕಾಲ ಕಂಪನದ ಅನುಭವ ಉಂಟಾಗಿದೆ. ಮಂಗಳೂರು, ಉಡುಪಿ, ಕಾರವಾರ, ಬಿಜಾಪುರ, ಹುಬ್ಬಳ್ಳಿ-ಧಾರವಾಡ, ಗುಲಬರ್ಗ, ದಾವಣಗೆರೆ ಸೇರಿದಂತೆ ಕರ್ನಾಟಕದ ಅನೇಕ ನಗರಗಳಲ್ಲಿ ಕಂಪನ ಉಂಟಾಗಿದ್ದು, ಜನರು ಭಯಭೀತರಾಗಿ ಕಚೇರಿ, ಅಪಾರ್ಟ್ಮೆಂಟ್ಗಳಿಂದ ಹೊರಓಡಿ ಬಂದಿದ್ದಾರೆ.
ಕರ್ನಾಟಕ ಕರಾವಳಿಯಲ್ಲಿ ಎಚ್ಚರಿಕೆ ಗಂಟೆ : ಮಂಗಳೂರಿನಲ್ಲಿ ಸಂಜೆ 4.10ರ ಹೊತ್ತಿಗೆ ಎರಡನೇ ಬಾರಿ ಭೂಮಿ ಕಂಪಿಸಿದೆ. ಯಾವುದೇ ಕಾರಣಕ್ಕೂ ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ಇಳಿಯದಂತೆ ತೀರದಲ್ಲಿ ಧ್ವನಿವರ್ಧಕಗಳ ಮುಖಾಂತರ ಎಚ್ಚರಿಕೆ ನೀಡಲಾಗಿದೆ. ಮತ್ತು ಸಮುದ್ರಕ್ಕಿಳಿದಿದ್ದ ಹಡಗುಗಳಿಗೆ ಲಂಗರು ಹಾಕುವಂತೆ ಸೂಚಿಸಲಾಗಿದೆ. ಕರ್ನಾಟಕದ ಕರಾವಳಿಯುದ್ದಕ್ಕೂ ಮೀನು ಹಿಡಿಯಲು ತೆರಳಿದ್ದ ಮೀಂಗುಲಿಗರು ಲಗುಬಗೆಯಿಂದ ತೀರಕ್ಕೆ ಮರಳುತ್ತಿದ್ದಾರೆ. ಸುನಾಮಿ ಅಪ್ಪಳಿಸಿದರೂ 1 ಮೀ.ನಷ್ಟು ಅಲೆಗಳು ಏಳಬಹುದೆಂದು ಅಂದಾಜಿಸಲಾಗಿದೆ.
ಆದರೆ, ಭೂ ವಿಜ್ಞಾನಿಗಳು ಹೇಳುವುದೇನೆಂದರೆ, ಪ್ರತಿಬಾರಿ ಭೂಕಂಪ ಆದಾಗಲೂ ಸುನಾಮಿ ಏಳಬೇಕಂತೇನೂ ಇಲ್ಲ. ಈ ಬಾರಿ ಕೂಡ ಕಳೆದ ಬಾರಿಯಂತೆ ಅನಾಹುತ ಮಾಡುವುದು ಕೂಡ ಕಡಿಮೆ. ಹೀಗಾಗಿ, ಭಾರತದ ಜನತೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿ, ಸುನಾಮಿ ಹಾನಿ ಮಾಡುವ ಸಂಭವನೀಯತೆ ಇಲ್ಲದಿದ್ದರೂ, ಜನರಿಗೆ ಎಚ್ಚರದಿಂದಿರಬೇಕೆಂದು ಸೂಚಿಸಲಾಗಿದೆ. ಭೂಮಿ ಕಂಪಿಸಿ ಕಟ್ಟಡ ಅಲುಗಾಡಿದಾಗ ಕೂಡಲೆ ಬಯಲು ಪ್ರದೇಶಕ್ಕೆ ಬರಬೇಕೆಂದು ಸೂಚಿಸಲಾಗಿದೆ.
ಇಂಡೋನೇಷ್ಯಾದ ಸುತ್ತಮುತ್ತಲಿನ ದೇಶಗಳಾದ ಶ್ರೀಲಂಕಾ, ಬಾಂಗ್ಲಾದೇಶ, ಜಪಾನ್, ಥೈಲ್ಯಾಂಡ್, ಸಿಂಗಪುರ, ಪಾಕಿಸ್ತಾನ, ಮ್ಯಾನ್ಮಾರ್, ಸೋಮಾಲಿಯಾ, ಓಮನ್, ಮಲೇಶಿಯಾ, ಇರಾನ್, ಕೀನ್ಯಾ, ದಕ್ಷಿಣ ಆಫ್ರಿಕಾ, ಮಾಲ್ಡೀವ್ಸ್ ದ್ವೀಪಗಳಲ್ಲಿ ಭೂಮಿ ಕಂಪಿಸಿದೆ. ಕೆಲವೇ ಗಂಟೆಗಳಲ್ಲಿ ನೀಡಲಾಗಿದ್ದ ಸುನಾಮಿ ಎಚ್ಚರಿಕೆಯನ್ನು ಈ ಎಲ್ಲ ದೇಶಗಳಲ್ಲಿ ಹಿಂತೆಗೆದುಕೊಳ್ಳಲಾಗಿದೆ. ಈಗ ಆಗಿರುವ ಭೂಕಂಪನದಿಂದ ಹೆಚ್ಚಿನ ಅನಾಹುತ ಉಂಟುಮಾಡುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 2004ರ ಡಿಸೆಂಬರ್ 26ರಂದು ಸಂಭವಿಸಿದ್ದ 9.1 ಪ್ರಮಾಣದ ಪ್ರಬಲ ಭೂಕಂಪ ಮತ್ತು ಸುನಾಮಿಯಿಂದಾಗಿ 2 ಲಕ್ಷ 30 ಜನರು ಜೀವ ಕಳೆದುಕೊಂಡಿದ್ದರು.