ಹರಕೆ ತೀರಿಸಲು ಭಾರತಕ್ಕೆ ಬಂದ ಜರ್ದಾರಿ
ಜರ್ದಾರಿ ಹಾಗೂ ಪಾಕಿಸ್ತಾನದಿಂದ ಬಂದಿರುವ 40 ಜನ ನಿಯೋಗವನ್ನು ಭಾರತದ ಸಂಸದೀಯ ವ್ಯವಹಾರ ಖಾತೆ ಸಚಿವ ಪವನ್ ಕುಮಾರ್ ಬನ್ಸಾಲ್ ಅವರು ಪ್ರಧಾನಿ ಮನಮೋಹನ್ ಸಿಂಗ್ ಪರವಾಗಿ ಆತ್ಮೀಯವಾಗಿ ಸ್ವಾಗತಿಸಿದರು.
ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರವಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿವಾಸಕ್ಕೆ ಪಾಕ್ ಅಧ್ಯಕ್ಷ ಜರ್ದಾರಿ ತೆರಳಿದ್ದಾರೆ.
ಇದು ಖಾಸಗಿ ಭೇಟಿ: ಅಜ್ಮೇರ್ ದರ್ಗಾಕ್ಕೆ ಖಾಸಗಿ ಭೇಟಿ ನೀಡುವ ಸಲುವಾಗಿ ಜರ್ದಾರಿ ಅವರು ಭಾರತಕ್ಕೆ ಆಗಮಿಸುತ್ತಿದ್ದಾರೆ. ದರ್ಗಾದಲ್ಲಿ ಹರಕೆ ತೀರಿಸಿಕೊಳ್ಳಲು ಜರ್ದಾರಿ ಬಂದಿದ್ದಾರೆ. ಪ್ರಧಾನಿ ಸಿಂಗ್ ಅವರ ಅಧಿಕೃತ ನಿವಾಸದಲ್ಲಿ ಇಬ್ಬರೇ ಮಾತುಕತೆ ನಡೆಸಿದ ನಂತರ ಔತಣ ಕೂಟ ಏರ್ಪಡಿಸಲಾಗಿದೆ.
ಇದು ಅನೌಪಚಾರಿಕ ಮಾತುಕತೆ, ಯಾವುದೇ ಪೂರ್ವ ನಿಗದಿ ಕಾರ್ಯಕ್ರಮ, ಸಭೆ ನಡೆಯುತ್ತಿಲ್ಲ ಎಂದು ಪ್ರಧಾನಿ ಮಂತ್ರಿ ಸಿಂಗ್ ಸಚಿವಾಲಯ ಹೇಳಿದೆ.
ಬಿಗಿ ಭದ್ರತೆ: ವಿಮಾನ ನಿಲ್ದಾಣದಿಂದ ಪ್ರಧಾನಿ ನಿವಾಸದವರೆಗಿನ ಮಾರ್ಗದಲ್ಲಿ ಎನ್ಎಸ್ಜಿ ಯೋಧರ ಕಾವಲು ಹಾಕಲಾಗಿದೆ.
ಜೊತೆಗೆ ಸುಮಾರು 2000 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಶಾರ್ಪ್ ಶೂಟರ್ಗಳು ಎತ್ತರದ ಕಟ್ಟಡಗಳಲ್ಲಿ ನಿಂತು ನಿಗಾ ಇಡಲಿದ್ದಾರೆ. ಅಧಿಕಾರಿಗಳು ಎಲ್ಲೆಡೆ ಗಸ್ತು ತಿರುಗುತ್ತಿದ್ದಾರೆ ಎಂದು ನವದೆಹಲಿ ಪೊಲೀಸರು ಹೇಳಿದ್ದಾರೆ.