ಬರಪ್ರದೇಶಕ್ಕೆ ಭೇಟಿ ನೀಡದೆ ಯಡಿಯೂರಪ್ಪ ವಾಪಸ್
ಉತ್ತರ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಾಕಿಕೊಂಡಿದ್ದ ಯಡಿಯೂರಪ್ಪನವರು, ಹಠಾತ್ತನೆ ಪ್ರವಾಸವನ್ನು ಮೊಟಕುಗೊಳಿಸಿ, ಸಮಯದ ಅಭಾವವಿರುವುದರಿಂದ ಗುಲಬರ್ಗ ಮತ್ತು ಬೀದರ್ ಜಿಲ್ಲೆಗಳಿಗೆ ಭೇಟಿ ನೀಡುವುದಿಲ್ಲ ಎಂದು ಹೇಳಿದ್ದಾರೆ. ನೀರಿನ ಅಭಾವವಿರುವ ಪ್ರದೇಶಕ್ಕೆ ಭೇಟಿ ನೀಡಿಲು ಯಡಿಯೂರಪ್ಪನವರಿಗೆ ಸಮಯದ ಅಭಾವ!
ರಣರಣ ಬಿಸಿಲಿನಲ್ಲಿ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಕಾಳಬೆಳಗುಂದಿ ಮತ್ತು ಮಾದ್ವಾರ ಕೆರೆ ಪ್ರದೇಶಕ್ಕೆ ಭೇಟಿ ನೀಡಿದ ಯಡಿಯೂರಪ್ಪನವರು, ಹೈಕಮಾಂಡಿನಿಂದ ಕರೆಬಂದಿರುವ ಕಾರಣ ಬೆಂಗಳೂರಿಗೆ ಮರಳುತ್ತಿರುವುದಾಗಿ ಹೇಳಿದ್ದಾರೆ.
ಈ ಪ್ರದೇಶಗಳಿಗೆ ಕೇಂದ್ರ ಸರಕಾರ 500 ಕೋಟಿ ರು. ನೆರವನ್ನು ನೀಡಬೇಕು ಎಂದು ಹೇಳಿರುವ ಯಡಿಯೂರಪ್ಪನವರು, ನೀರಿಲ್ಲದೆ ಮೇವಿಲ್ಲದೆ ರೈತರು ಜಾನುವಾರುಗಳನ್ನು ಮಾರುತ್ತಿರುವ ಬಗ್ಗೆ ಪ್ರಸ್ತಾಪಿಸಬೇಕಿತ್ತು. ಕುಡಿಯಲು ಹನಿ ನೀರಿಲ್ಲದೆ ಒದ್ದಾಡುತ್ತಿರುವ ಜನ, ಒರತೆಯಿಂದ ದಾಹ ತೀರಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಒಂದು ಬಾರಿ ಸಾಕ್ಷಾತ್ ನೋಡಬೇಕಾಗಿತ್ತು.
ಇಷ್ಟೇ ಅಲ್ಲ, ಬೆಂಗಳೂರಿಗೆ ಮರಳದೆ, ಬಾಗಲಕೋಟೆಯಲ್ಲಿ ಮತ್ತು ಬಿಜಾಪುರ ಜಿಲ್ಲೆಗಳಿಗೆ ಭೇಟಿ ನೀಡಿ, ದೇವರ ಹೆಸರಿನಲ್ಲಿ ಮಕ್ಕಳನ್ನು ತೇರಿನಿಂದ ಕೆಳಕ್ಕೆ ಎಸೆಯುತ್ತಿರುವ ಅಮಾನವೀಯ ಘಟನೆ ಬಗ್ಗೆ ಯಡಿಯೂರಪ್ಪನವರು ಯಾಕೆ ಮಾತನಾಡುತ್ತಿಲ್ಲ ಎಂದು ಯಾದಗಿರಿಯ ಪ್ರಜ್ಞಾವಂತ ಮತದಾರರು ಕೇಳುತ್ತಿದ್ದಾರೆ.