ಸಂಕಷ್ಟದಲ್ಲಿ ಜಾನುವಾರು : ಕಡೆಗೂ ಎಚ್ಚೆತ್ತ ಸರಕಾರ
ಅವರು ಶನಿವಾರ ಗುಲಬರ್ಗಾದಲ್ಲಿ ಗುಲಬರ್ಗ ವಿಭಾಗ ಮಟ್ಟದ ಬರಪರಿಹಾರ ಜಾನುವಾರು ಮೇವು ಮತ್ತು ಕುಡಿಯುವ ನೀರು ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಗುಲಬರ್ಗಾ ಜಿಲ್ಲೆಯ ಎಲ್ಲ 32 ಹೋಬಳಿಗಳಲ್ಲಿ ಮೇವು ಬ್ಯಾಂಕ್ ಮತ್ತು ಗೋಶಾಲೆಗಳನ್ನು ತುರ್ತಾಗಿ ಪ್ರಾರಂಭಿಸಲು ನಿರ್ದೇಶನ ನೀಡಲಾಗಿದೆ ಎಂದರು.
ಜಾನುವಾರುಗಳು ಕಸಾಯಿಖಾನೆಗೆ ಹೋಗಿರುವ ವರದಿಗಳು ಬಂದಿಲ್ಲವಾದರೂ ಜಾನುವಾರುಗಳ ಸಂರಕ್ಷಣೆಯ ಹಿತದೃಷ್ಟಿಯಿಂದ ಪಶುಸಂಗೋಪನಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಟೆಂಡರ್ದಿಂದ ಉನ್ನತಮಟ್ಟದವರೆಗಿನ ಎಲ್ಲ ಸಿಬ್ಬಂದಿ ಮತ್ತು ಅಧಿಕಾರಿಗಳು ಸಾಮೂಹಿಕವಾಗಿ ಕಾರ್ಯನಿರ್ವಹಿಸುವುದು ಅವಶ್ಯಕವಾಗಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ ಬರುವ ಏಪ್ರಿಲ್ 12ರಂದು ರಾಜ್ಯ ಮಟ್ಟದ ಎಲ್ಲ ಇಲಾಖಾಧಿಕಾರಿಗಳ ಸಭೆ ಕರೆಯಲಾಗಿದೆ ಎಂದರು.
ರಾಜ್ಯದ 24 ಜಿಲ್ಲೆಗಳ 143 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಿಸಿದ್ದು, ಸದ್ಯಕ್ಕೆ 18 ವಾರಗಳಿಗೆ ಸಾಕಾಗುವಷ್ಟು 87.93 ಲಕ್ಷ ಮೆಟ್ರಿಕ್ ಟನ್ ಮೇವು ಲಭ್ಯವಿದೆ. ಚಿತ್ರದುರ್ಗ, ಉಡುಪಿ, ಕೊಪ್ಪಳ, ಚಾಮರಾಜನಗರ, ಶಿವಮೊಗ್ಗ, ರಾಯಚೂರು, ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಮೇವಿನ ಗಂಭೀರ ಪರಿಸ್ಥಿತಿ ಇದ್ದು, ಈ ಜಿಲ್ಲೆಗಳಲ್ಲಿ 3ರಿಂದ 9 ವಾರದವರೆಗೆ ಸಾಕಾಗುವಷ್ಟು ಮೇವು ಲಭ್ಯವಿದೆ. ರಾಜ್ಯದಲ್ಲಿ ಮೇವಿನ ಕೊರತೆ ಹಾಗೂ ಸಮಸ್ಯೆ ಉಂಟಾದರೆ ಬೇರೆ ರಾಜ್ಯಗಳಿಂದಲೂ ಮೇವು ತರಿಸಲು ಸರ್ಕಾರ ಸಿದ್ಧವಿದೆ ಎಂದು ಅವರು ವಿವರಿಸಿದರು.