ಮುತ್ತುಲಕ್ಷ್ಮಿ ಆರೋಪಕ್ಕೆ ಶಂಕರ ಬಿದರಿ ತಿರುಗೇಟು
ನನ್ನ ಜೀವಮಾನದಲ್ಲಿ ಮುತ್ತುಲಕ್ಷ್ಮಿಯನ್ನು ನಾನು ಭೇಟಿ ಮಾಡಿದ್ದು ಕೇವಲ ಐದು ನಿಮಿಷ ಮಾತ್ರ. ಸುತ್ತಲೂ ನೂರಾರು ಜನರಿದ್ದರು. ಅಂತಹ ಸಮಯದಲ್ಲಿ ಮಾಂಗಲ್ಯ ಕಿತ್ತಿದ್ದು ಸತ್ಯಕ್ಕೆ ದೂರವಾದ ಮಾತು ಎಂದು ತಿರುಗೇಟು ನೀಡಿರುವ ಅವರು, ನನ್ನ ತೇಜೋವಧೆ ಮಾಡಲು, ನನಗೆ ಕಳಂಕ ತರಲು ವ್ಯವಸ್ಥಿತ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಪ್ರತ್ಯಾರೋಪ ಮಾಡಿದರು.
ಟಿವಿ9 ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ, ಎಸ್ಟಿಎಫ್ ಕಾರ್ಯಾಚರಣೆಯಲ್ಲಿ ತಾವು ಮಾಡಿದ ಸೇವೆಯನ್ನು ನೆನಪು ಮಾಡಿಕೊಂಡ ಬಿದರಿಯವರು, ಮೂರು ವರ್ಷಗಳ ಕಾಲ ನಾನು ಮತ್ತು ನನ್ನ ಸಹೋದ್ಯೋಗಿಗಳು ಪ್ರಾಣ ಒತ್ತೆಯಿಟ್ಟು ಕೆಲಸ ಮಾಡಿದ್ದೇವೆ. ರಾಜ್ಯ ಏನೇ ಮಾಡಿದರು ಆ ಋಣ ತೀರಿಸಲು ಸಾಧ್ಯವಿಲ್ಲ. ನಾವು ಮಾಡಿದ ತ್ಯಾಗ ಮರೆತರೆ ಅದಕ್ಕಿಂತ ಹೀನವಾದ ಕೆಲಸ ಮತ್ತೊಂದಿಲ್ಲ ಎಂದು ನೊಂದು ನುಡಿದರು.
ನನ್ನ ವಿರುದ್ಧ ಐದಾರು ತಿಂಗಳುಗಳಿಂದ ಭಾರೀ ಷಡ್ಯಂತ್ರ ನಡೆಯುತ್ತಿದೆ. ನನ್ನಿಂದ ದೌರ್ಜನ್ಯ ನಡೆದಿರುವ ಬಗ್ಗೆ ಸದಾಶಿವ ಆಯೋಗ ಪ್ರಸ್ತಾಪಿಸಿಲ್ಲ, ಮಾನವ ಹಕ್ಕು ಆಯೋಗ ಕೂಡ ಒಂದೇ ಒಂದು ನೋಟೀಸ್ ನೀಡಿಲ್ಲ. ಈಗ ಇದ್ದಕ್ಕಿದ್ದಂತೆ ಮುತ್ತುಲಕ್ಷ್ಮಿಯನ್ನು ನನ್ನ ವಿರುದ್ಧ ಕರೆತರಲಾಗಿದೆ. ಆಕೆಯ ಬಾಯಿಯಿಂದ ಇಲ್ಲಸಲ್ಲದ ಆರೋಪಗಳನ್ನು ಮಾಡಿಸಲಾಗುತ್ತಿದೆ. ಇದಕ್ಕೆಲ್ಲ ಪ್ರತ್ಯುತ್ತರ ನೀಡುವ ತಾಕತ್ತು ನನಗಿದೆ ಎಂದು ಅವರು ನುಡಿದರು.
ನಾನು 1993ರಲ್ಲಿ ಎಸ್ಟಿಎಫ್ ಮುಖ್ಯಸ್ಥನಾಗಿ ಚಾರ್ಜ್ ತೆಗೆದುಕೊಂಡೆ. ಅಂದಿನಿಂದ ನನ್ನ ಜೀವ ನನ್ನದಲ್ಲ ಅಂತ ನಿರ್ಧರಿಸಿಬಿಟ್ಟೆ. ನನ್ನ ಎಸ್ಟಿಎಫ್ ಸಹೋದ್ಯೋಗಿಗಳು ಕೂಡ ಸುಸಂಸ್ಕೃತಿ ಮನೆತನದಿಂದ ಬಂದವರಿದ್ದರು, ಶೇ 99ರಷ್ಟು ಒಳ್ಳೆಯ ಅಧಿಕಾರಿಗಳಿದ್ದರು. ಅವರೇನು ರಾಕ್ಷಸರಲ್ಲ, ಅವರಲ್ಲಿಯೂ ಮಾನವೀಯತೆಯಿದೆ ಎಂದು ಕಾರ್ಯಾಚರಣೆಯಲ್ಲಿ ಇದ್ದ ಅಧಿಕಾರಿಗಳನ್ನು ಬಿದರಿ ಸಮರ್ಥಿಸಿಕೊಂಡರು.
ಕೆಲ ಅಧಿಕಾರಿಗಳು ಅತ್ಯಾಚಾರ, ದೌರ್ಜನ್ಯ ಎಸಗಿರಬಹುದು. ಆದರೆ, ಎಲ್ಲದಕ್ಕೂ ಶಂಕರ್ ಬಿದರಿ ಅವರನ್ನೇ ತಪ್ಪಿತಸ್ಥರನ್ನಾಗಿ ಮಾಡುವುದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದರು. ಒಟ್ಟು 18 ಸಾವಿರ ಚದರಡಿ, ಐದು ನದಿಗಳು ಹರಿಯುತ್ತಿದ್ದ ಬೃಹತ್ ಅರಣ್ಯದಲ್ಲಿ ಕಮಾಂಡ್ ಆಪರೇಷನ್ ನಡೆಸಲಾಗಿತ್ತು. ಎಲ್ಲ ಕಡೆ ಏನೇನು ನಡೆದಿದ್ದರೂ ಅದಕ್ಕೆ ನನ್ನ ಒಬ್ಬನ ಹೆಸರನ್ನು ಮಾತ್ರ ಏಕೆ ತೆಗೆದುಕೊಳ್ಳಲಾಗುತ್ತಿದೆ. ಬೇರೆಯವರ ಹೆಸರು ಏಕೆ ತೆಗೆದುಕೊಳ್ಳುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
41 ವರ್ಷಗಳ ಕಾಲ ಕನ್ನಡದ ಮಣ್ಣಿನ ಮಗನಾಗಿ ಸೇವೆ ಸಲ್ಲಿಸಿದ್ದೇನೆ. ತಿಳಿದೂ ತಿಳಿದೂ ಯಾವುದೇ ತಪ್ಪು ಮಾಡಿಲ್ಲ. ಆದರೆ, ಸತ್ಯ ಹರಿಶ್ಚಂದ್ರರಂತೆ, ಸತ್ತ ಹರಿಶ್ಚಂದ್ರರಂತೆ ಮಾತನಾಡುತ್ತಿರುವವರಿಗೆ ನನ್ನ ವಿರುದ್ಧ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಅವರು ವ್ಯಂಗ್ಯವಾಡಿದರು. ಅಸಲಿಗೆ ನಮ್ಮಲ್ಲಿಯೇ ಹಿತಶತ್ರುಗಳಿದ್ದಾರೆ. ಅವರೆಲ್ಲರಿಗೆ ಉತ್ತರ ನೀಡುವ ಕಾಲ ಬಂದೇ ಬರುತ್ತದೆ ಎಂದು ಅವರು ತಿರುಗೇಟು ನೀಡಿದರು.