ರಾಷ್ಟ್ರಾಧ್ಯಕ್ಷೆ ದಂತವೈದ್ಯೆ : ಮಿತ್ರಾ ಹೇಳಿಕೆ ಸುಳ್ಳು
ಈ ವಿಷಯಕ್ಕೆ ಸಂಬಂಧಿಸಿದಂತೆ ಗುರುವಾರ, ಏ.5ರಂದು ಪತ್ರಿಕಾಗೋಷ್ಠಿ ಕರೆದಿದ್ದ ಅವರು, ಡಾ. ಮಿತ್ರಾ ಅವರು ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿದ್ದಲ್ಲದೆ, ದಂತ ವೈದ್ಯಕೀಯ ಸಂಘಟನೆಯ ನಿಯಮಗಳನ್ನು ಗಾಳಿಗೆ ತೂರಿದ್ದರು ಎಂದು ವಿವರಿಸಿದರು. ರಾಷ್ಟ್ರಪತಿ ಭವನ ಕೂಡ ಮಿತ್ರಾ ಅವರನ್ನು ರಾಷ್ಟ್ರಪತಿಗಳ ದಂತವೈದ್ಯರನ್ನಾಗಿ ನೇಮಕ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದೆ ಎಂದು ತಿಳಿಸಿದರು.
ಡಾ. ಮಿತ್ರಾ ಅವರು 2010ರಲ್ಲಿ ಪತ್ರಿಕಾಗೋಷ್ಠಿ ನಡೆಸಿ, ತಮ್ಮನ್ನು ಪ್ರತಿಭಾ ಪಾಟೀಲ್ ಅವರು ದಂತವೈದ್ಯೆಯನ್ನಾಗಿ ನೇಮಕ ಮಾಡಲಾಗಿದೆ ಎಂದು ಘೋಷಿಸಿದ್ದರು. ನಂತರ ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದರು ಮತ್ತು ಜನಪ್ರಿಯತೆ ಗಳಿಸಿದ್ದರು. ಅವರ ಹೇಳಿಕೆಯ ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳಲು ಡಾ. ಶಿವಶರಣ್ ಶೆಟ್ಟಿ ಎಂಬುವವರು ಆರ್ಟಿಐ ಕಾಯ್ದೆಯಡಿಯಲ್ಲಿ ಅರ್ಜಿ ಸಲ್ಲಿಸಿದ್ದರು.
2011ರಲ್ಲಿ ಮಿತ್ರಾ ಅವರ 'ಸ್ಥಾನ'ವನ್ನು ಗುರುತಿಸಿ ರಾಜ್ಯ ಸರಕಾರ ಅವರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. ಮಿತ್ರಾ ಅವರ ಹೇಳಿಕೆ ಸುಳ್ಳೆಂದು ಸಾಬೀತಾಗಿರುವ ಕಾರಣ ಈಗ ಆ ಪ್ರಶಸ್ತಿಯನ್ನು ಕರ್ನಾಟಕ ಸರಕಾರ ಹಿಂದೆ ಪಡೆಯಬೇಕೆಂದು ಕಾಮತ್ ಆಗ್ರಹಿಸಿದರು.
ಸುಳ್ಳು ಹೇಳಿ ಜನಪ್ರಿಯತೆ ಗಳಿಸಿದ್ದಲ್ಲದೆ, ರೋಗಿಗಳಿಂದ ಸಿಕ್ಕಾಪಟ್ಟೆ ಹಣ ಕಿತ್ತುಕೊಳ್ಳುತ್ತಿದ್ದರೆಂದು ಅವರು ಆರೋಪಿಸಿದರು. ಕರ್ನಾಟಕ ಡೆಂಟಿಸ್ಟ್ ಅಸೋಸಿಯೇಷನ್, ರಾಜ್ಯಪಾಲರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ರಾಷ್ಟ್ರಪತಿ ಭವನದ ಕಾರ್ಯದರ್ಶಿಗೆ ಮಿತ್ರಾ ಅವರ ವಿರುದ್ಧ ದೂರು ನೀಡಲಾಗಿದೆ. ಮಿತ್ರಾ ಅವರು ಕೂಡ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದು ಅವರು ಹೇಳಿದರು.
ಮಿತ್ರಾ ಆಘಾತ : ಕಾಮತ್ ಅವರು ನಡೆಸಿರುವ ಪತ್ರಿಕಾಗೋಷ್ಠಿಯಿಂದ ತಮಗೆ ತುಂಬಾ ಆಘಾತವಾಗಿದೆ ಎಂದು ಡಾ. ಮಿತ್ರಾ ಹೆಗಡೆ ಅವರು ಹೇಳಿದ್ದಾರೆ. ಅರ್ಹತೆಯ ಆಧಾರದ ಮೇಲೆ ತಮ್ಮನ್ನು ರಾಷ್ಟ್ರಪತಿಗಳ ವೈಯಕ್ತಿಯ ದಂತವೈದ್ಯೆಯನ್ನಾಗಿ ನೇಮಕ ಮಾಡಲಾಗಿತ್ತು ಎಂದು ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. 2010ರಲ್ಲಿ ರಾಷ್ಟ್ರಾಧ್ಯಕ್ಷೆ ತಮ್ಮ ಕ್ಲಿನಿಕ್ಗೆ ಬಂದಿದ್ದರು ಎಂದೂ ಹೇಳಿಕೆ ನೀಡಿದ್ದಾರೆ.