ಯಡ್ಡಿಯಿಂದ 'ಬರಗೆಟ್ಟ' ರಾಜಕಾರಣ: ಸಿದ್ದು ಗುದ್ದು
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ಘೋಷಣೆಯಾಗಿ 4 ತಿಂಗಳು ಕಳೆದರೂ, ಯಡಿಯೂರಪ್ಪ ಈಗಷ್ಟೇ ಎಚ್ಚೆತ್ತುಕೊಂಡಿದ್ದಾರೆ. ಬರ ಪೀಡಿತ ಪ್ರದೇಶಗಳಿಗೆ ಅವರು ಪ್ರವಾಸ ಮಾಡುತ್ತಿದ್ದು, ಅಲ್ಲಿನ ಜನತೆಯ ಮೇಲಿನ ಕಾಳಜಿಯಿಂದಲ್ಲ. ಬದಲಾಗಿ ಪ್ರವಾಸದ ಹೆಸರಲ್ಲಿ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಅಧಿವೇಶನದ ಸಂದರ್ಭ ಸುಮ್ಮನೆ ಕುಳಿತಿದ್ದ ಯಡಿಯೂರಪ್ಪಗೆ ಇದೀಗ ದಿಢೀರನೆ ಬರ ಪೀಡಿತ ಪ್ರದೇಶಗಳ ನೆನಪು ಬಂದಿದೆ ಎಂದು ವ್ಯಂಗ್ಯವಾಡಿದ ಸಿದ್ದರಾಮಯ್ಯ, ರೆಸಾರ್ಟ್ ರಾಜಕೀಯದಲ್ಲಿ ತಲ್ಲೀನರಾಗಿದ್ದ ಸಂದರ್ಭದಲ್ಲಿ ಬರ ಪೀಡಿತ ಪ್ರದೇಶದ ಜನರ ಸಮಸ್ಯೆಗಳು ಯಡಿಯೂರಪ್ಪರಿಗೆ ಯಾಕೆ ಅರ್ಥವಾಗಲಿಲ್ಲ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯರಿಂದ ರಾಜಕೀಯ ಕಲಿಯಬೇಕಾಗಿಲ್ಲ (ಬಿಜಾಪುರ ವರದಿ): ಸಿದ್ದರಾಮಯ್ಯರಿಂದ ತಾನು ರಾಜಕೀಯ ಕಲಿಯಬೇಕಾಗಿಲ್ಲ. ಎಲುಬಿಲ್ಲದ ನಾಲಿಗೆಯಲ್ಲಿ ಅವರು ಹೇಗೆ ಬೇಕಾದರೂ ಮಾತನಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಪಕ್ಷ ನಾಯಕ ಸಿದ್ದರಾಮಯ್ಯರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬರ ಪೀಡಿತ ಪ್ರದೇಶಗಳ ಅಧ್ಯಯನ ಪ್ರವಾಸದಲ್ಲಿರುವ ಯಡಿಯೂರಪ್ಪ ಬಿಜಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿ ವಿಫಲರಾಗಿದ್ದಾರೆ. ಅವರು ಬರ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು ಜನರ ಸಮಸ್ಯೆಗಳನ್ನು ಆಲಿಸಬೇಕಿತ್ತು. ಆದರೆ, ಅವರು ಅದಕ್ಕೆ ಮುಂದಾಗದೆ ತನ್ನ ಕರ್ತವ್ಯವನ್ನು ಮರೆತಿದ್ದಾರೆ. ತನಗೆ ಅವರು ನೀತಿ ಪಾಠ ಹೇಳುವ ಅಗತ್ಯವಿಲ್ಲ ಎಂದರು.