ಮೇಲುಕೋಟೆ ವೈರಮುಡಿ ಉತ್ಸವದಲ್ಲಿ ಅರ್ಚಕರ ಕಿರಿಕ್
ಆದರೆ ನಿಗದಿತ ಸಮಯಕ್ಕೆ ಸರಿಯಾಗಿ ನಡೆಯಬೇಕಾಗಿದ್ದ ಉತ್ಸವ ಈ ಬಾರಿ ವಜ್ರಖಚಿತ ವೈರಮುಡಿ, ರಾಜಮುಡಿ ಕಿರೀಟಗಳನ್ನು ಜಿಲ್ಲಾ ಖಜಾನೆಯಿಂದ ಕೊಂಡೊಯ್ಯುವ ವೇಳೆ ಅರ್ಚಕರ ನಡುವೆ ಕಿರಿಕಿರಿ ಉಂಟಾಗಿದ್ದರಿಂದ 2 ಗಂಟೆ ವಿಳಂಬವಾಯಿತು. ಇದು ಸಾರ್ವಜನಿಕರ ಆಕೋಶಕ್ಕೂ ಕಾರಣವಾಯಿತು.
ಸಂಪ್ರದಾಯದಂತೆ ಖಜಾನೆಯಿಂದ ಮುಂಜಾನೆ 6 ಗಂಟೆಗೆ ರತ್ನಖಚಿತ ಕಿರೀಟಗಳನ್ನು ಹೊರತೆಗೆಯಲಾಗುತ್ತಿತ್ತು. ಆದರೆ, ದೇವಾಲಯ ಸ್ಥಾನಿಕರ (ಪೂಜಾರಿಗಳು) ಕಚ್ಚಾಟದಿಂದ ತಡವಾಗಿ 8.30ಕ್ಕೆ ಹೊರತೆಗೆಯಲಾಯಿತು. ಕಿರೀಟಗಳನ್ನು ಕೊಂಡೊಯ್ಯುವ ವಿಚಾರವಾಗಿ ಮೇಲುಕೋಟೆ ದೇವಾಲಯದ ನಾಲ್ಕು ಮಂದಿ ಸ್ಥಾನಿಕರ ನಡುವೆ ಕಲಹ ಶುರುವಾಗಿ ಕಿರೀಟಗಳಿಗೆ ಪೂಜೆ ಸಲ್ಲಿಸಲು ವಿಳಂಬವಾಯಿತು. ಇದರಿಂದ ತಾಳ್ಮೆ ಕಳೆದುಕೊಂಡ ಭಕ್ತರು ಸಿಡಿದೆದ್ದರು.
ಅರ್ಚರಕರನ್ನು ತರಾಟೆಗೆ ತೆಗೆದುಕೊಂಡ ನಾಗರಿಕರು, ಕಿರೀಟ ನಿಮ್ಮ ಮನೆಯ ಸ್ವತ್ತಲ್ಲ ಎಂದು ತಿರುಗಿ ಬಿದ್ದರು. ಎಚ್ಚೆತ್ತ ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್, ಸಂಪ್ರದಾಯದಂತೆ ನಡೆದುಕೊಳ್ಳದಿದ್ದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಜಿಲ್ಲಾಧಿಕಾರಿಗಳ ಎಚ್ಚರಿಕೆಯಿಂದ ವಿಚಲಿತರಾದ ಸ್ಥಾನಿಕರು ಪರಸ್ಪರ ಮಾತಾಡಿಕೊಂಡು ಕಿರೀಟಕ್ಕೆ ಪೂಜೆ ಸಲ್ಲಿಸಿ ಅನ್ಯೋನ್ಯವಾಗಿ ನಡೆದುಕೊಂಡರು. ನಂತರ, ಸಾಂಗವಾಗಿ ಇತರ ವಿಧಿವಿಧಾನಗಳು ನಡೆದವು.