ಇವರೇಕೆ ಆಡಿದ ಮಾತನ್ನು ಉಳಿಸಿಕೊಳ್ಳುವುದಿಲ್ಲ?
ಇಂತಹ ಅನೇಕಾನೇಕ ಪೌರುಷದ ಮಾತಿನ ಮಿಂಚು ಆಗಾಗ ಮಿಂಚುತ್ತಲೇ ಇರುತ್ತದೆ. ಒಂದಿಲ್ಲೊಂದು ಹಗರಣಗಳಲ್ಲಿ ಭಾಗಿಯಾಗಿರುವ ರಾಜಕಾರಣಿ ಅಥವಾ ಇನ್ನಾವುದೇ ವ್ಯಕ್ತಿ ಇಂತಹ ಪ್ರತಿಜ್ಞೆ ಮಾಡುತ್ತಲೇ ಇರುತ್ತಾರೆ. ಆದರೆ, ಯಾರಾದರೂ ನಿವೃತ್ತಿಯಾಗಿದ್ದಾರಾ? ಸನ್ಯಾಸ ತೆಗೆದುಕೊಂಡಿದ್ದಾರಾ? ಅಥವಾ ಗುಡ್ ಬೈ ಹೇಳಿದ್ದಾರಾ?
ಉತ್ತರ ಮಾತ್ರ ಬಿಗ್ ಬೋಂಡಾ. ವಕ್ಫ್ ಬೋರ್ಡ್ ಆಸ್ತಿಯನ್ನು ಕಬಳಿಸಿರುವ ವ್ಯಕ್ತಿಗಳ ಪಟ್ಟಿಯಲ್ಲಿ ಕಂಡುಬಂದಿರುವ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ, ತಮ್ಮ ಎಂದಿನ ಬಿಂದಾಸ್ ಶೈಲಿಯಲ್ಲಿ "ನನ್ನ ಮೇಲಿನ ಆರೋಪ ಸಾಬೀತಾದರೆ ರಾಜಕೀಯದಿಂದ ನಿವೃತ್ತನಾಗುತ್ತೇನೆ" ಎಂದು ಅಲ್ಲಾನ ಮೇಲೆ ಆಣೆ ಪ್ರಮಾಣ ಮಾಡಿ ಹೇಳಿದ್ದಾರೆ. ನಿವೃತ್ತರಾಗುತ್ತಾರಾ?
ಇಂಥದೇ ಡೈಲಾಗನ್ನು ಹೇಳದಿರದ, ಹಗರಣದಲ್ಲಿ ಸಿಲುಕಿಕೊಂಡಿರುವ ರಾಜಕಾರಣಿಯ ಹೆಸರು ಹೇಳಿ ನೋಡೋಣ? ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಅವರಪ್ಪ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟು ನಿರಾಶರಾಗಿರುವ ಸಿದ್ದರಾಮಯ್ಯ, ನಿವೃತ್ತನಾಗುತ್ತೇನೆ ಎಂದು ಹೇಳುತ್ತಲೇ ಸಿಎಂ ಪಟ್ಟದ ಮೇಲೆ ಕಣ್ಣಿಟ್ಟಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಮುಂತಾದ ರಾಜಕಾರಣಿಗಳು ಈ ನುಡಿಮುತ್ತುಗಳನ್ನು ಉದುರಿಸಿದವರೆ? ಇವರಾರ ವಿರುದ್ಧವೂ ಆರೋಪ ಇನ್ನೂ ಸಾಬೀತಾಗಿಲ್ಲದಿರಬಹುದು, ಆದರೆ, ಇಂಥ ಡೈಲಾಗುಗಳಿಗೇನು ಕಮ್ಮಿ ಇರುವುದಿಲ್ಲ.
ರಾಜಕಾರಣಿಗಳಷ್ಟೇ ಏಕೆ, ಚಿತ್ರರಂಗದವರೂ ಹಿಂದೆ ಬಿದ್ದಿಲ್ಲ. ನಿರ್ದೇಶನ, ನಿರ್ಮಾಣ, ಎಡಿಟಿಂಗ್, ಸಂಗೀತ ನಿರ್ದೇಶನ, ಚಿತ್ರಕತೆ, ನಟನೆ, ಮಾಡಿ ಬೇಸತ್ತಿರುವ ಮತ್ತು ಸುಸ್ತಾಗಿರುವ 'ಕಲಾ ಸಾಮ್ರಾಟ್' ಎಸ್ ನಾರಾಯಣ್ ಇಂಥ ಬೆದರಿಕೆ ಹಾಕಿದ್ದಾರೆ. ಹಿಂದೆ ಕಿರಿಕ್ ಮಾಡಿಕೊಂಡಾಗ ನಟಿ ರಮ್ಯಾ ಕೂಡ ನಟನೆಗೆ ಗುಡ್ ಬೈ ಎಂದಿದ್ದರು. ಹೇಳಿದ್ರಾ? ಆಂಗ್ರಿ ಮಿಡ್ಲ್ ಏಜ್ಡ್ ಮ್ಯಾನ್ ಸುದೀಪ್ ಕೂಡ ಮೀಸೆ ನೀವಿಕೊಳ್ಳುತ್ತ ನಟನಾ ಸನ್ಯಾಸ ತೆಗೆದುಕೊಳ್ಳುವುದಾಗಿ ಗುಡುಗಿದ್ದರು. ಇವರೆಲ್ಲಾ ಯಾಕೆ ಹೀಗೆ? ಆಡಿದ ಮಾತನ್ನು ಯಾಕೆ ಉಳಿಸಿಕೊಳ್ಳುವುದಿಲ್ಲ?