ಅಸಹಾಯಕ ನವವಧುವಿನ ಮೇಲೆ ಪೇದೆ ಬಲಾತ್ಕಾರ
ಅತ್ಯಾಚಾರಕ್ಕೆ ಒಳಗಾದ ಮಹಿಳೆ ಮೈಸೂರು ಜಿಲ್ಲೆಯ ಹೆಗ್ಗಡೆದೇವನ ಕೋಟೆ ತಾಲೂಕಿನ ಸಿಂಗಮಾರನಹಳ್ಳಿಯವಳು. ಕೆಲದಿನಗಳ ಹಿಂದೆ ಮದುವೆಯಾಗಿದ್ದ ಮಹಿಳೆ ಗಂಡ ಮತ್ತು ತನ್ನ ಚಿಕ್ಕಮ್ಮನ ಮಗಳೊಂದಿಗೆ ಹರಕೆ ತೀರಿಸಲೆಂದು ತುಳಜಾಪುರಕ್ಕೆ ಹೋಗುತ್ತಿದ್ದಳು.
ತುಳಜಾಭವಾನಿ ದರುಶನಕ್ಕೆಂದು ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಹೆಂಡತಿಯನ್ನು ನಿಲ್ದಾಣದಲ್ಲಿ ಕೂಡಿಸಿ, ಆಕೆಯ ಚಿಕ್ಕಮ್ಮನ ಮಗಳೊಂದಿಗೆ ನಗರದೊಳಗೆ ಗಂಡ ಪರಾರಿಯಾಗಿದ್ದಾನೆ. ಆಕೆಯ ಪತಿಗೆ ಚಿಕ್ಕಮ್ಮನ ಮಗಳೊಂದಿಗೆ ಅನೈತಿಕ ಸಂಬಂಧವಿತ್ತೆಂದು ತಿಳಿದುಬಂದಿದೆ.
ಸುಮಾರು ಹೊತ್ತು ಅವರು ರೈಲ್ವೆ ನಿಲ್ದಾಣಕ್ಕೆ ಮರಳದಿದ್ದರಿಂದ ವಧು ತಾನೇ ಅವರನ್ನು ಹುಡುಕಲು ನಗರಕ್ಕೆ ಬಂದಿದ್ದಾಳೆ. ಆಕೆ ಅಲ್ಲಿ ಅವರಿವರನ್ನು ವಿಚಾರಿಸುತ್ತ ಏಕಾಂಗಿಯಾಗಿ ಅಲೆದಾಡುತ್ತಿದುದನ್ನು ಪೊಲೀಸ್ ಪೇದೆ ನೋಡಿದ್ದಾನೆ. ಕಣ್ಣೀರುಗರೆಯುತ್ತ ನಿಂತಿದ್ದ ಅವರನ್ನು ಊರಿಗೆ ಮರಳಿಸುವುದಾಗಿ ಪೇದೆ ಭರವಸೆ ನೀಡಿದ್ದಾನೆ.
ಅವನ ಮಾತನ್ನು ನಂಬಿದ ಅಮಾಯಕ ಹೆಂಗಸು ಪೇದೆಯ ಬಲೆಯಲ್ಲಿ ಬಿದ್ದಿದ್ದಾಳೆ. ಆಕೆಯ ಅಸಹಾಯಕತೆಯ ದುರ್ಲಾಭ ಪಡೆದ ಪೇದೆ ವಧುವಿನ ಮೇಲೆ ಅತ್ಯಾಚಾರವೆಸಗಿದ್ದಾನೆ. ಪ್ರಕರಣ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೇದೆಯ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ. ಅತ್ಯಾಚಾರದಿಂದ ಜರ್ಝರಿತಳಾದ ವಧುವನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಡನ ಸುಳಿವು ಕೂಡ ಇನ್ನೂ ದೊರೆತಿಲ್ಲ.