ಪೆಟ್ರೋಲ್ ಬೆಲೆ ಇಳಿಕೆಗೆ ಸದಾನಂದ ಗೌಡ ನಕಾರ
ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಕೂಡ ಚಿಂತನೆಗೆ ಬಿದ್ದಿದ್ದು, ಇತರ ಮೆಟ್ರೋ ನಗರಗಳು ಕೂಡ ಗೋವಾದ ದಾರಿಯಲ್ಲಿ ಸಾಗಿದರೆ 15 ರು.ನಷ್ಟು ಪೆಟ್ರೋಲ್ ದರ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ. ಇದೇ ನಿಟ್ಟಿನಲ್ಲಿ ನಮ್ಮ ಮುಖ್ಯಮಂತ್ರಿಗಳಾದ ಡಿವಿ ಸದಾನಂದ ಗೌಡರು ಕೂಡ ಯಾಕೆ ವ್ಯಾಟ್ ಕಡಿಮೆ ಮಾಡಬಾರದು ಎಂಬ ಪ್ರಶ್ನೆ ನಾಡಿನ ಪ್ರಜೆಗಳು ಕೇಳುತ್ತಿದ್ದಾರೆ.
ಕರ್ನಾಟಕದಲ್ಲಿ ಪೆಟ್ರೋಲ್ ಮೇಲೆ ಶೇ.25ರಷ್ಟು ವ್ಯಾಟ್ ಜಡಿಯಲಾಗಿದ್ದು, ಶೇ.5ರಷ್ಟು ಹೆಚ್ಚುವರಿ ಪ್ರವೇಶ ತೆರಿಗೆಯನ್ನು ಕೂಡ ವಿಧಿಸಲಾಗುತ್ತಿದೆ. ರಾಜ್ಯ ಬಜೆಟ್ಟಿನಲ್ಲಿ ಡೀಸೆಲ್ ಮೇಲಿನ ವ್ಯಾಟನ್ನು ಶೇ.2ರಷ್ಟು ಇಳಿಸಿದ್ದರು. ಆದರೆ, ಪೆಟ್ರೋಲಿನ ವಿಷಯಕ್ಕೆ ಬಂದಾಗ 'ನೋ ಚಾನ್ಸ್' ಎಂದು ಹೇಳಿ ಗೌಡರು ಕೈ ಆಡಿಸಿಬಿಟ್ಟಿದ್ದಾರೆ. ಪೆಟ್ರೋಲ್ ಬೆಲೆ ರಾಜ್ಯದಲ್ಲಿಯೂ ಕಡಿಮೆಯಾಗುತ್ತದೆ ಎಂಬ ಗಾಳಿಸುದ್ದಿಗೆ ಪೂರ್ಣವಿರಾಮ ಹಾಕಿದ್ದಾರೆ.
ಒಂದು ವೇಳೆ ವ್ಯಾಟ್ ಕಡಿಮೆಗೊಳಿಸಿದ್ದೇ ಆದಲ್ಲಿ ಬೆಂಗಳೂರಿನಲ್ಲಿ ಲೀಟರಿಗೆ 73.51 ರು. ಇರುವ ಪೆಟ್ರೋಲ್ 58 ರು.ಗೆ ಇಳಿಯಲಿದೆ. ಇದು ಸಾಧ್ಯವಾದರೆ ಸಾಮಾನ್ಯರ ಮೇಲಿನ ಭಾರೀ ಹೊರೆಯನ್ನು ಇಳಿಸಿದಂತಾಗುತ್ತದೆ. 1 ಲಕ್ಷ ಕೋಟಿ ರು. ಬಜೆಟ್ ಮಂಡಿಸಿರುವ ಡಿವಿ ಸದಾನಂದ ಗೌಡರು ಈ ನಿಟ್ಟಿನಲ್ಲಿ ಚಿಂತಿಸುವರೆ? ಕನಿಷ್ಠಪಕ್ಷ ಹೆಚ್ಚುವರಿ ಪ್ರವೇಶ ತೆರಿಗೆಯನ್ನಾದರೂ ಕಡಿತಗೊಳಿಸಲಿ ಎನ್ನುವುದು ದುಬಾರಿ ನಗರ ಎಂಬ ಹಣೆಪಟ್ಟಿ ಕಟ್ಟಿಸಿಕೊಂಡಿರುವ ಬೆಂಗಳೂರಿನ ಜನರ ಆಶಯ.