ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏ.1ರಂದು ರಂಗಶಂಕರದಲ್ಲಿ ಮತ್ತೆ ಜುಗಾರಿ ಕ್ರಾಸ್

By Mahesh
|
Google Oneindia Kannada News

Jugari Cross Kannada Play
ಬೆಂಗಳೂರು, ಮಾ.29: ಸಮುದಾಯ ಬೆಂಗಳೂರು ಅಭಿನಯಿಸುವ ದಿವಂಗತ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಜುಗಾರಿ ಕ್ರಾಸ್ ದಿನಾಂಕ ಏಪ್ರಿಲ್ 1, ಭಾನುವಾರದಂದು ನಗರದ ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ.

ನಟರಾಜ ಹೊನ್ನವಳ್ಳಿಯವರ ನಿರ್ದೇಶನದ ಈ ನಾಟಕ ಈಗಾಗಲೇ 55ಕ್ಕೂ ಹೆಚ್ಚು ಪ್ರ್ರದರ್ಶನಗಳನ್ನು ಕಂಡು ನೂರನೇ ಪ್ರದರ್ಶನದ ಕಡೆಗೆ ದಾಪುಗಾಲಿಡುತ್ತಿದೆ.

ವಾರಾಂತ್ಯದಲ್ಲಿ ಮಕ್ಕಳಿಂದ ಮುದುಕವರೆಗೆ ಮನರಂಜನೆ ನೀಡಬಲ್ಲ ಈ ನಾಟಕ ನೋಡಲು ಮರೆಯದಿರಿ ಎಂದು ಸಮುದಾಯ ತಂಡದ ಕಾರ್ಯದರ್ಶಿ ವೆಂಕಟೇಶ್ ಪ್ರಸಾದ್ ಅವರು ಒನ್ ಇಂಡಿಯಾ ಕನ್ನಡಕ್ಕೆ ಹೇಳಿದ್ದಾರೆ.

ಕಾಡು ಮೇಡುಗಳಲ್ಲಿ ಅಲೆಯುತ್ತ ಪಕ್ಷಿ ಪರಿಸರಗಳ ಕುರಿತು ವಿಶೇಷ ಅಧ್ಯಯನ ಮಾಡಿದ ತೇಜಸ್ವಿ ಕಟ್ಟಿಕೊಟ್ಟ ಕಥೆಯನ್ನು ನಾಟಕ ರೂಪಕ್ಕೆ ತಂದವರು ಕನ್ನಡ ರಂಗಭೂಮಿಯ ಮತ್ತೊಬ್ಬ ವಿಶೇಷ ಪ್ರತಿಭೆಯಾದ ನಟರಾಜ ಹೊನ್ನವಳ್ಳಿಯವರು.

ಕಥೆ ವಿವರ: ಲೇಖಕ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರೇ ಹೇಳಿಕೊಂಡಿರುವಂತೆ ಒಂದು ಕ್ಷಣಕ್ಕೆ ರೊಮ್ಯಾಂಟಿಕ್ ಥ್ರಿಲ್ಲರ್ ಎಂದೆನಿಸಬಹುದಾದ ಈ ಕೃತಿ ಬದಲಾಗುತ್ತಿರುವ ಸನ್ನಿವೇಶಗಳು ಉಂಟುಮಾಡುತ್ತಿರುವ ಅವಾಂತರ ಅಪಾಯಗಳನ್ನೂ, ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರದೇಶಗಳಲ್ಲಿ ಜಾಗತಿಕ ಪರಿಣಾಮಗಳು ಸೃಷ್ಟಿಸಬಹುದಾದ ತಲ್ಲಣಗಳನ್ನು ಎಳೆಎಳೆಯಾಗಿ ಪ್ರೇಕ್ಷಕರ ಮುಂದಿಡುತ್ತಾ ಹೋಗುತ್ತದೆ.

ಕೇವಲ 24 ಘಂಟೆಗಳಲ್ಲಿ ನಡೆಯುವ ಈ ನಾಟಕದ ಕಥೆ ನಿಜವಾಗಿಯೂ ಸಹ್ಯಾದ್ರಿಯ ಕಾಡುಗಳ ತಪ್ಪಲಿನಲ್ಲಿ ನಡೆಯಬಹುದಾದ ವಾಸ್ತವದ ಸಾಮಾಜಿಕ ಕಾದಂಬರಿ. ಮಲೇನಾಡಿನ ದಟ್ಟ ಕಾಡೇ ಕಾಳ ಧಂಧೆಗಳ ತವರೂರಾಗುವುದು, ಈ ಕಾಳ ವ್ಯವಹಾರಗಳ ಜೊತೆಜೊತೆಗೇ ಡ್ರಗ್ಸ್ ಮಾಫಿಯಾ ಜೂಜು ಸೇರಿ, ಏಲಕ್ಕಿ ಮಾರಲೆಂದು ಹೊರಟ ವಿದ್ಯಾವಂತ ರೈತ ದಂಪತಿಗಳಾದ ಸುರೇಶ ಮತ್ತು ಗೌರಿ ಆ ವ್ಯೂಹದಲ್ಲಿ ಸಿಕ್ಕಿಹಾಕಿಕೊಳ್ಳುವುದೇ ಈ ಕಥೆಯ ಹಿನ್ನೆಲೆ.

ಹುಸಿ ಕ್ರಾಂತಿಕಾರಿ ಗಂಗೂಲಿ, ಅರವತ್ತು ಸಾವಿರ ಲಂಚ ಕೊಟ್ಟು ಅದನ್ನು ಗಿಟ್ಟಿಸಲು ಪೇಚಾಡುವ ಇಕ್ಬಾಲ್, ಇಪ್ಪತ್ತು ರೂಪಾಯಿಗೂ ಖೂನಿಮಾಡಬಲ್ಲ ಜಾನಿ ಹೆನ್ರಿ, ಅನಧಿಕೃತವಾಗಿ ಚೆಕ್‌ಗಳನ್ನು ಕ್ಯಾಷ್ ಮಾಡುವ ಶೇಷಪ್ಪ ಪಾತ್ರಗಳಂತೆ ಕಾಣದೆ ಪ್ರೇಕ್ಷಕರ ನಡುವೆ ಇರುವ ಸಹಜ ವ್ಯಕಿಗಳಂತೆ ಗೋಚರಿಸುತ್ತಾರೆ.

ತೇಜಸ್ವಿಯವರ ಈ ಕಾದಂಬರಿಯನ್ನು ಸೂಕ್ಷ್ಮವಾಗಿ ರಂಜನೀಯವಾಗಿ ವಿನ್ಯಾಸಗೊಳಿಸಿ ನಿರ್ದೇಶಿಸಿರುವ ನಟರಾಜ ಹೊನ್ನವಳ್ಳಿಯವರ ಸೃಜನಶೀಲತೆ ನಾಟಕದಲ್ಲೆಡೆ ಅನುಭವಕ್ಕೆ ಬರುತ್ತದೆ. ಥ್ರಿಲ್ ನೀಡುವ ಸಂಗೀತ, ಅದ್ಭುತ ಬೆಳಕಿನಾಟ, ಹೊಸಲೋಕ ಸೃಷ್ಟಿಸುವ ರಂಗಸಜ್ಜಿಕೆ ಈ ನಾಟಕದ ವೈಶಿಷ್ಟ್ಯ. ಸಾಹಿತ್ಯ ಪ್ರಿಯರು ಮತ್ತು ರಂಗಾಸಕ್ತರಲ್ಲದೇ ಎಲ್ಲರೂ ಕೂಡ ನೋಡಿ ಅನುಭವಿಸಬಹುದಾದ ನಾಟಕ ಜುಗಾರಿ ಕ್ರಾಸ್ !

ನಾಟಕ : ಜುಗಾರಿ ಕ್ರಾಸ್
ರಚನೆ : ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ನಾಟಕ ರೂಪ ಮತ್ತು ನಿರ್ದೇಶನ : ನಟರಾಜ್ ಹೊನ್ನವಳ್ಳಿ
ಸಂಗೀತ : ಗಜಾನನ ಟಿ. ನಾಯ್ಕ
ಸ್ಥಳ : ರಂಗಶಂಕರ, ಜೆ.ಪಿ. ನಗರ. ಬೆಂಗಳೂರು
ದಿನಾಂಕ/ವಾರ : 01/04/2012 ಭಾನುವಾರ
ಸಮಯ : ಮಧ್ಯಾಹ್ನ 3.30 ಹಾಗೂ ಸಂಜೆ 7.30
ಸಂಪರ್ಕಿಸಿ : 99001 82400.
ಟಿಕೆಟ್ ದರ: 70 ರೂಪಾಯಿಗಳು.
ವೆಬ್ ಸೈಟ್ : www.indianstage.in

English summary
Samudaya Team is performing Jugari Cross Kannada play based on KP Poornachandra Tejaswi's novel by the same name. Samudaya Team has already completed 55th show of Jugari Cross Play and now repeat show on Apr.1 People can enjoy the play which is romantic thriller at Rangashankara, JP Nagar, Bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X