ಯಡಿಯೂರಪ್ಪ: ಶನಿವಾರ ಮತ್ತೆ ಶುರುವಾಗಲಿದೆ ಕಾಟ
ಮೊದಲು ಬಜೆಟ್ ಪಾಸ್ ಆಗಲಿ. ಆಮೇಲೆ ನಿಮಗೆ ಸೂಕ್ತ ಸ್ಥಾನಮಾನ ಎಂದು ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಪಟಾಲಂಗೆ ಹೇಳಿಕಳಿಸಿರುವುದು ಇಡೀ ಜಗತ್ತಿಗೇ ಗೊತ್ತಿದೆ. ಇದೇ ವೇಳೆ ಹೈಕಮಾಂಡ್ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂಬುದು ಸ್ವತಃ ಯಡಿಯೂರಪ್ಪಗೂ ಸೇರಿದಂತೆ ಎಲ್ಲರಿಗೂ ಅರ್ಥವಾದ ವಿಷಯವಾಗಿದೆ. ಆದ್ದರಿಂದಲೇ ಕೊನೆಯ ಪ್ರಯತ್ನವಾಗಿ ಯಡಿಯೂರಪ್ಪನವರೂ ಸುಮ್ಮನೇ ಬಜೆಟ್ ಪಾಸ್ ಆಗುವಂತೆ ನೋಡಿಕೊಳ್ಳುತ್ತಾರೆ. ಅದಕ್ಕಾಗಿಯೇ ಶುಕ್ರವಾರ ಸಂಜೆ (ಮಾರ್ಚ್ 30) ಎಲ್ಲ 121 ಶಾಸಕರನ್ನೂ ಚಹಾಕೂಟಕ್ಕೆ ಆಹ್ವಾನಿಸಿದ್ದಾರೆ.
ಆನಂತರ... ಸ್ವಾಮಿ ನೀವು ಹೇಳಿದಂತೆ ಎಲ್ಲವನ್ನೂ ನೆರವೇಸಿಕೊಟ್ಟಿದ್ದೇನೆ. ಇನ್ನೇನೂ ಸಬೂಬು ಹೇಳದೆ ನನಗೆ ಸೂಕ್ತ ಸ್ಥಾನಮಾನ ನೀಡಿ ಎನ್ನುವುದು ಯಡಿಯೂರಪ್ಪ ದೂರಾಲೋಚನೆ. ಆದರೆ ಇದಕ್ಕೆ ಏನು ಉತ್ತರ ಕೊಡಬೇಕು ಎಂಬುದೂ ಹೈಕಮಾಂಡಿಗೆ ಚೆನ್ನಾಗಿ ಗೊತ್ತಿದೆ. ಏನೇ ಆಗಲಿ ಯಡಿಯೂರಪ್ಪಗೆ ಅಧಿಕಾರ ಕೊಡಬೇಡಿ ಎಂಬ ಅಡ್ವಾಣಿ ಹಿಮ್ಮೇಳದೊಂದಿಗೆ ಹೈಕಮಾಂಡು ತನ್ನ ನಿಜ ಸ್ವರೂಪ ತೋರಲಿದೆ.
ಹೇಗೂ ಬಜೆಟ್ ಪಾಸಾಗಿದೆ. ಅದರಿಂದ ಸದಾನಂದ ಗೌಡರ ಸರಕಾರ ವಿಶ್ವಾಸ ಮತ ಗಳಿಸಿದಂತೆಯೇ ಸರಿ. ಸೋ, ಇನ್ನಾರು ತಿಂಗಳು ಸಾಂವಿಧಾನಿಕವಾಗಿ ಸದಾನಂದ ಗೌಡ ಸರಕಾರವನ್ನು ಯಾರು ಏನೂ ಮಾಡಲು ಸಾಧ್ಯವಿಲ್ಲ. ಆರು ತಿಂಗಳ ನಂತರ ಇದ್ದೇ ಇದೆ... ಅವಧಿಪೂರ್ವ ಚುನಾವಣೆ ಎಂಬುದು ಹೈಕಮಾಂಡಿನ ಲೆಕ್ಕಾಚಾರ. ಅಲ್ಲಿವರೆಗೂ ಯಡಿಯೂರಪ್ಪ ಸುಮ್ಮನಿರುತ್ತಾರಾ ಕಾಲಾಯತಸ್ಮೈನಮಃ.