ತೊಟ್ಲೂ ತೂಗಿ ಯಡ್ಡಿಯ ಚಿವುಟುತ್ತಿರುವ ಸದಾನಂದ
ಏನ್ ಹಾಗೆಂದರೆ, ಮುಖ್ಯಮಂತ್ರಿ ಹುದ್ದೆ ನಿಭಾಯಿಸುತ್ತಿಲ್ಲವಾ!? ಎಂದು ಆಶ್ಚರ್ಯ ಚಕಿತರಾಗಬೇಡಿ. ಆ ಹುದ್ದೆಯನ್ನು ಉಳಿಸಿಕೊಳ್ಳುವ ಸಲುವಾಗಿಯೇ ಅವರು ಇಂತಹ ಸಾಹಸಕ್ಕೆ ಇಳಿದಿದ್ದಾರೆ.
ರಾಮ(ಭಟ್ಟ) ಬಾಣ: ಪಟ್ಟಕ್ಕಾಗಿ ಯಡಿಯೂರಪ್ಪನವರ ಎಗರಾಟವನ್ನು ಒಂದು ಹಂತದವರೆಗೂ ಹಿಡಿದಿಟ್ಟಿರುವ ಸದಾನಂದರು ಮುಂದಿನ ತೊಗಲುಗೊಂಬೆ ಆಟಕ್ಕಾಗಿ ಸೂತ್ರವನ್ನು ಬೇರೆಯವರ ಕೈಗೆ ಒಪ್ಪಿಸಿ, ಆಟ enjoy ಮಾಡುತ್ತಿದ್ದಾರೆ. ಇತ್ತ ಯಡಿಯೂರಪ್ಪನವರನ್ನು ಸಮಾಧಾನಪಡಿಸುವಂತೆ ನಟಿಸುತ್ತಾ, ಅತ್ತ ತಮ್ಮ ರಾಜಕೀಯ ಗುರು-ಗೈಡ್ ಉರಿಮಜಲು ರಾಮಭಟ್ಟರ ಮೂಲಕ ದಿಲ್ಲಿ ವೇದಿಕೆಯಲ್ಲಿ ಯಕ್ಷಗಾನ ಆಡಿಸುತ್ತಿದ್ದಾರೆ.
ಮೊನ್ನೆಯಷ್ಟೇ ಕಾಂಗ್ರೆಸ್ ಶಾಸಕ ನೆ.ಲ. ನರೇಂದ್ರ ಬಾಬು ಬೆಳಕಿಗೆ ತಂದಿದ್ದ ಯಡಿಯೂರಪ್ಪ ಅಕ್ರಮ ಡಿನೋಟಿಫಿಕೇಷನ್ ಪ್ರಕರಣವನ್ನು ಸದಾನಂದಗೌಡರು ಕಾನೂನುಬದ್ಧವಾಗಿ ಸರಿತಿದ್ದಿ, ಕೈತೊಳೆದುಕೊಂಡರು. ಯಾವ ಪ್ರಕರಣದಲ್ಲಿ ಯಡಿಯೂರಪ್ಪಗೆ ಕೋರ್ಟು ಛೀಮಾರಿ ಹಾಕಿತ್ತೋ ಅದನ್ನು ತಣ್ಣಗಾಗಿಸಿದರು. ಸದ್ಯ ಮತ್ತೊಂದು ಕೋರ್ಟ್ ಕಂಟಕ ತಪ್ಪಿತಲ್ಲ ಅಂತ ಯಡಿಯೂರಪ್ನೋರೂ ಸಂತುಷ್ಟಗೊಂಡರು.
ಆದರೆ ಪಟ್ಟಕ್ಕಾಗಿ ಗೌಡರು ಆಡುತ್ತಿರುವ ಪಗಡೆಯಾಟವೇ ಬೇರೆ. ಅವರುರುಳಿಸುತ್ತಿರುವ ದಾಳವೇ ಬೇರೆ. ದಿಲ್ಲಿಯಲ್ಲಿ ವರಿಷ್ಠರ ಮುಂದೆ ಹಿರಿಯ ತಲೆಗಳನ್ನು ಪೆರೇಡ್ ಮಾಡಿಸಿ, ತಾವು ಪರದೆ ಕೆ ಪೀಛೆ ಉಳಿದಿದ್ದಾರೆ. 'ಹೇಗಾದರೂ ಮಾಡಿ ಈ ಬಾರಿ ಯಡಿಯೂರಪ್ಪನವರನ್ನು ಕಟ್ಟಿ ಹಾಕಿ ಗುರುಗಳೇ' ಎಂದು ಉರಿಮಜಲು ರಾಮಭಟ್ಟರಿಗೆ ವೀಳ್ಯ ನೀಡಿದ್ದಾರೆ. ಅದರಂತೆ ಸದಾನಂದರ ಸಿಎಂ ಪಟ್ಟವನ್ನು Team Shivappa ದೆಹಲಿಯಲ್ಲಿ ಭದ್ರಪಡಿಸುತ್ತಿದೆ. ತನ್ಮೂಲಕ ಯಡಿಯೂರಪ್ಪನವರ ಪ್ರಯತ್ನಗಳಿಗೆ ಅಂತಿಮ ಮೊಳೆ ಹೊಡೆಯುತ್ತಿದೆ.